ಬೆಂಗಳೂರು: ಸರಗಳ್ಳರಿಂದ ಇರಿತಕೊಳ್ಳಗಾದ ವ್ಯಕ್ತಿ ಸ್ಥಳೀಯರು ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಮಹಿಳೆಯ ಕುತ್ತಿಗೆಯಲ್ಲಿನ ಚಿನ್ನದ ಸರವನ್ನು ಕಸಿಯಲು ಬಂದ ಕಳ್ಳನನ್ನು ಹಿಡಿಯಲು ಹೋಗಿ ಕಳ್ಳರಿಂದ ಇರಿತಕ್ಕೊಳಗಾಗಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸ್ಥಳೀಯ ನಿವಾಸಿಗಳು ವೈಯುಕ್ತಿಕವಾಗಿ ಹಣ ಸಂಗ್ರಹಣೆ ಮಾಡಿ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಡಿಸೆಂಬರ್ 22ರಂದು ರಾತ್ರಿ 10 ಗಂಟೆಗೆ ಹೊಸಕೋಟೆಯ ಕಮ್ಮವಾರಿ ನಗರದ ಅಂಗಡಿಯಲ್ಲಿ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದಿದ್ದರು. ಬೈಕ್ ಸವಾರರಿಬ್ಬರು ಸಿಗರೇಟ್ ಖರೀದಿ ಮಾಡಿ ಅಂಗಡಿ ಮಾಲಕಿ ಗೌರಮ್ಮನವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಸಿಯಲು ಯತ್ನಿಸಿದ್ದರು. ಈ ವೇಳೆ ಗೌರಮ್ಮ ಕಿರುಚಾಡಿದಾಗ ನೆರೆಮನೆಯ ಚಂದ್ರು ಬಂದು ಕಳ್ಳರನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ಕಳ್ಳರು ಡ್ರ್ಯಾಗನ್ ನಿಂದ ಹೊಟ್ಟೆ, ಕೈ ಭಾಗಕ್ಕೆ ಬಲವಾಗಿ ತಿವಿದು ಪರಾರಿಯಾದ್ದರು.
ಅಧಿಕ ರಕ್ತಸ್ರಾವವಾಗಿದ್ದ ಚಂದ್ರು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆಗೊಳಗಾದ ಚಂದ್ರು ಚಾಲಕ ವೃತ್ತಿ ಮಾಡುತ್ತಿರುವ ಪರಿಣಾಮ ಚಿಕಿತ್ಸೆಗೆ ವೆಚ್ಚ ಭರಿಸಲು ಕಷ್ಟವಾಗಿದ್ದು, ಇದನ್ನರಿತ ಕಮ್ಮವಾರಿ ನಗರದ ನಾಗರೀಕರು ಸೇರಿ ಸುಮಾರು 85 ಸಾವಿರ ರೂ. ಸಂಗ್ರಹಣೆ ಮಾಡಿ ಚಿಕಿತ್ಸೆಗೆ ನೆರವು ನೀಡಿದ್ದಾರೆ. ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಸರ್ಕಾರದಿಂದ ನೆರವು ಕೊಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.