ನವದೆಹಲಿ: ಕೇಂದ್ರ ಸರ್ಕಾರವು ಕೇರಳ ಜೊತೆಗಿದೆ. ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ನೀಡಿದ್ದಾರೆ.
ಭೂಕುಸಿತ ಪೀಡಿತ ಕೇರಳದ (Kerala) ವಯನಾಡಿಗೆ (Wayanad Landslide) ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದರು. ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು. ಬಳಿಕ ನೆರವಿನ ಕುರಿತು ಮಾತನಾಡಿದ ಅವರು, ಘಟನೆ ನಡೆದ ದಿನ ಬೆಳಗ್ಗೆ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ
ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ, ಪೊಲೀಸರು, ವೈದ್ಯರು, ಎಲ್ಲರೂ ಸಂತ್ರಸ್ತರಿಗೆ ಸಾಧ್ಯವಾದಷ್ಟು ಬೇಗ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಏಜೆನ್ಸಿಗಳನ್ನು ತ್ವರಿತ ಕೆಲಸಗಳಿಗೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಗಳು ಒಬ್ಬಂಟಿಯಾಗಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ. ಕೇಂದ್ರವು ಕೇರಳ ಸರ್ಕಾರದ ಜೊತೆ ನಿಂತಿದ್ದು, ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ; ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ
ಈ ದುರಂತ ಸಾಮಾನ್ಯವಲ್ಲ. ಸಾವಿರಾರು ಕುಟುಂಬಗಳ ಕನಸುಗಳು ಭಗ್ನಗೊಂಡಿವೆ. ನಾನು ಸ್ಥಳದಲ್ಲೇ ಪರಿಸ್ಥಿತಿ ನೋಡಿದ್ದೇನೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ನಾನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಗಾಯಗೊಂಡಿರುವ ರೋಗಿಗಳನ್ನೂ ಭೇಟಿ ಮಾಡಿದ್ದೇನೆ ಎಂದು ನೋವಿನಿಂದ ಮಾತನಾಡಿದ್ದಾರೆ.