ಧಾರವಾಡ: ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (Dk Shivakumar) ಪರಸ್ಪರ ಮುಖ ನೋಡುವುದಿಲ್ಲ. ರಾಹುಲ್ ಗಾಂಧಿಯೇ (Rahul Gandhi) ಬಂದು ಅಪ್ಪಿಕೊಳ್ಳಿ ಎಂದು ಹೇಳಬೇಕಿದೆ. ಮೊದಲು ಅವರ ಮನೆಯನ್ನು ಸರಿಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕುಟುಕಿದ್ದಾರೆ.
ಧಾರವಾಡದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರತ್ಯೇಕವಾಗಿ ರಾಹುಲ್ ಪಾದಯಾತ್ರೆಗೆ (Bharat Jodo Yatra) ಜನ ಸೇರಿಸಿದ್ದಾರೆ. ಪ್ರತ್ಯೇಕವಾಗಿಯೇ ಊಟ ಹಾಕಿಸಿದ್ದಾರೆ. ಪ್ರತ್ಯೇಕವಾಗಿಯೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತಿಗೂ ಅವರಲ್ಲಿ ಒಗ್ಗಟ್ಟಿಲ್ಲ. ಈಗ ಖರ್ಗೆ ಒಬ್ಬರು ಸೇರಿಕೊಂಡಿದ್ದಾರೆ. ಈ ಮೂವರೂ ಪರಸ್ಪರ ಮುಖ ನೋಡೋದೇ ಇಲ್ಲ. ರಾಹುಲ್ ಗಾಂಧಿಯೇ (Rahul Gandhi) ಬಂದು ಪರಸ್ಪರ ಅಪ್ಪಿಕೊಳ್ಳಿ, ತಬ್ಬಿಕೊಳ್ಳಿ ಅಂತಾ ಹೇಳಬೇಕಾಗಿದೆ. ಮೊದಲು ತಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ. ಆ ಮೇಲೆ ಬಿಜೆಪಿ (BJP) ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಯಾತ್ರೆ ಎಂಬ ಪದಕ್ಕೆ ನಾಂದಿ ಹಾಡಿದ್ದೇ ಬಿಜೆಪಿ. ಬಹಳ ವರ್ಷಗಳ ಹಿಂದೆಯೇ ವಾಜಪೇಯಿ, ಎಲ್.ಕೆ ಅಡ್ವಾಣಿ (LK Advani ಕಾಲದಿಂದಲೂ ಬಿಜೆಪಿ ಅನೇಕ ಯಾತ್ರೆಗಳನ್ನು ಮಾಡುತ್ತಾ ಬಂದಿದೆ. ಇದೀಗ ಬಿಜೆಪಿಯಿಂದ ನಡೆದ ಜನಸಂಕಲ್ಪ ಯಾತ್ರೆ ಕೂಡ ಯಶಸ್ವಿಯಾಗಿ ಮುಗಿದಿದೆ. ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಕಾಪಿ ಹೊಡೆದು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶದೊಳಗೆ ಭಾರತವನ್ನು ಜೋಡಿಸುವ ಪ್ರಮೇಯ ಎಲ್ಲಿ ಬರುತ್ತದೆಯೋ ಗೊತ್ತಿಲ್ಲ. ಇದನ್ನು ಕಾಂಗ್ರೆಸ್ನವರೇ (Congress) ಹೇಳಬೇಕು ಎಂದಿದ್ದಾರೆ.
ಈಗ ಭಾರತ ಜೋಡೋ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್ನವರು, 98 ವರ್ಷಗಳ ಕಾಲ ಬಾಂಗ್ಲಾ ದೇಶಕ್ಕೆ ತೀನ್ಬೇಗಾ ಪ್ರದೇಶ ಬಿಟ್ಟುಕೊಟ್ಟಿದ್ದರು. ನೆಹರೂ ಅವರು ಹಿಮಾಲಯದಲ್ಲಿ ಹುಲ್ಲು ಕಡ್ಡಿ ಸಹಿತ ಬೆಳೆಯುವುದಿಲ್ಲ ಎಂದು ಲೋಕಸಭೆಯಲ್ಲಿ ಹೇಳಿ, ಅದನ್ನು ಚೀನಾಕ್ಕೆ ಬಿಟ್ಟುಕೊಟ್ಟರು. ಅಲ್ಲಿ ಇವರು ಭಾರತ ಜೋಡಿಸುವ ಕೆಲಸ ಮಾಡಬೇಕು. ಆದರೆ ರಾಹುಲ್ ಗಾಂಧಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.