ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ (Valmiki Development Corporation Scam) ಪ್ರಕರಣದಲ್ಲಿ ನಾಗೇಂದ್ರ (B Nagendra) ಬಂಧನ ವಿಚಾರವಾಗಿ ಗೃಹಸಚಿವ ಜಿ ಪರಮೇಶ್ವರ್ (G Parameshwar) ಪ್ರತಿಕ್ರಿಯಿಸಿದ್ದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದು. ತನಿಖೆಗೆ ನಮ್ಮ ತಕರಾರಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿಯವರು (ED) ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಏನು ಮಾಹಿತಿ ಸಿಕ್ಕಿದೆಯೋ ಆ ಆಧಾರದಲ್ಲಿ ಬಂಧಿಸಿದ್ದಾರೆ. ಇದು ಕಾನೂನಿನ ಪ್ರಕಾರ ನಡೆಯುವ ಪ್ರಕ್ರಿಯೆ. ಆದರೆ ಇದನ್ನು ರಾಜಕೀಯವಾಗಿ ಬಳಸಬಾರದು. ಸಿಐಡಿ ತನಿಖೆ ನಡೆಯುತ್ತಿತ್ತು. ಪ್ರಕರಣದಲ್ಲಿ ಇದ್ದಕ್ಕಿದ್ದಂತೆ ಇಡಿ ಪ್ರವೇಶ ಆಗಿದೆ ಎಂದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಯೂ ಇದ್ದಾರೆ – ಕೇಂದ್ರ ಸಚಿವ ಜೋಶಿ ಬಾಂಬ್!
ಇಡಿ ಬಂಧನದಿಂದ ತಪ್ಪಿಸಿಕೊಂಡು ಶಾಸಕ ದದ್ದಲ್ ಓಡಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ಎಸ್ಐಟಿಯವರು ನಾಗೇಂದ್ರ, ದದ್ದಲ್ ಇಬ್ಬರನ್ನೂ ಕರೆದು ವಿಚಾರಣೆ ಮಾಡಿದ್ದಾರೆ. ಅಗತ್ಯ ಕಂಡುಬಂದರೆ ಮತ್ತೆ ಕರೆಯುತ್ತಾರೆ. ದದ್ದಲ್ ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗಿಲ್ಲ. ಇಲ್ಲೇ ಎಲ್ಲೋ ಅವರ ಕುಟುಂಬದವರ ಜೊತೆ ಇದ್ದಾರೆ. ಶುಕ್ರವಾರವೂ ನಾನು ದದ್ದಲ್ ಬಗ್ಗೆ ಕೇಳಿದಾಗ ಅವರು ಇಲ್ಲೇ ಅವರ ಕುಟುಂಬದವರ ಜೊತೆ ಇದ್ದಾರೆ ಎಂದು ಹೇಳಿದ್ದಾರೆ. ಎಸ್ಐಟಿಯವರೇ ಬಂಧನ ಮಾಡಲಿ ಅಂತ ಸಿಐಡಿ ಕಚೇರಿಗೆ ದದ್ದಲ್ ಹೋಗಿದ್ದ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ನಿತಿನ್ ಗಡ್ಕರಿ ಎಚ್ಚರಿಕೆ
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆ ಆರೋಪದಲ್ಲಿ ಇಡಿ ದಾಳಿ ಆಗಿದೆ ಎಂಬ ವಿಚಾರದ ಕುರಿತು ಮಾತನಾಡಿ, ಇದು ನನಗೆ ಗೊತ್ತಿಲ್ಲ. ಇಡಿಯವರು ನಮ್ಮ ಪೊಲೀಸರಿಗೆ ಈ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ನಾವು ಊಹೆ ಮಾಡಿ ಹೇಳೋದು ಸರಿಯಲ್ಲ ಎಂದರು. ಬಿಜೆಪಿ ಮಾಜಿ ಎಮ್ಎಲ್ಸಿ ಡಿಎಸ್ ವೀರಯ್ಯ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು, ಅದೊಂದು 40-50 ಕೋಟಿ ರೂ. ಅವ್ಯವಹಾರದ ವಿಚಾರ. ವೀರಯ್ಯ ಅವರು ಹಿಂದೆ ದೇವರಾಜ ಅರಸು ನಿಗಮದ ಅಧ್ಯಕ್ಷರಾಗಿದ್ದಾಗ ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಿ ಅಕ್ರಮ ಆಗಿದೆ ಎಂದು ತನಿಖೆ ನಡೆಯುತ್ತಿದೆ. ಆ ತನಿಖೆ ಹಿನ್ನೆಲೆಯಲ್ಲಿ ವೀರಯ್ಯ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಹಿಂದಿನಿಂದ ಟ್ರಕ್ಗೆ ಡಿಕ್ಕಿ – ಮೂವರು ಸಾವು, 14 ಮಂದಿ ಗಂಭೀರ
ನಾಳೆ ಕಾವೇರಿ ಸರ್ವಪಕ್ಷ ಸಭೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಾಳೆ ತಾಂತ್ರಿಕ ಸಮಿತಿ ಏನು ವರದಿ ಕೊಡುತ್ತೋ ನೋಡಬೇಕು. ಎಷ್ಟು ನೀರು ಬರುತ್ತಿದೆ, ಎಷ್ಟು ನೀರು ನಾವು ಕೊಡಲು ಸಾಧ್ಯ ಎಮದು ನಾಳೆ ಸಮಿತಿ ಹೇಳುತ್ತದೆ. ಅವರಿಗೆ ಕೊಡುವಷ್ಟು ನೀರು ನಮ್ಮಲ್ಲಿ ಇರಬೇಕಲ್ಲ. ಈಗ ತಾನೇ ಮಳೆ ಬರುತ್ತಿದೆ. ನೀರು ಬಂದ ನಂತರ ಎಷ್ಟು ಹಂಚಿಕೆ ಮಾಡಲು ಆಗುತ್ತದೆ ಎಂದು ನೋಡಬೇಕು ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಲ್ಯಾಂಡ್ ಆಗದ ಇಂಡಿಗೋ – ಪರಮೇಶ್ವರ್ ಪ್ರವಾಸ ರದ್ದು