ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹವಾ ಇವತ್ತು ಬೆಂಗಳೂರಿನಲ್ಲಿ ಭರ್ಜರಿಯಾಗಿ ಇತ್ತು. ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಿದರು. ನೃಪತುಂಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಿಂಚಿನ ಸಂಚಾರ ಮಾಡಿದರು.
ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನೆಯನ್ನ ಅಮಿತ್ ಶಾ ಮಾಡಿದರು. ಇದರ ಜೊತೆಗೆ ವಿಶ್ವವಿದ್ಯಾಲಯದ ಲೋಗೋ ಅನಾವರಣ ಮಾಡಿದ ಶಾ, ವಿವಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದರು. ಸರ್ಕಾರಿ ಕಲಾ ಕಾಲೇಜು ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಆಗಮಿಸಿದ ಕೂಡಲೇ ವಿದ್ಯಾರ್ಥಿಗಳು ಅಮಿತ್ ಶಾರಿಗೆ ಜೈಕಾರದ ಸ್ವಾಗತ ಮಾಡಿದರು. ವಿದ್ಯಾರ್ಥಿಗಳಿಗೆ ಕೈಬೀಸಿ ಅಭಿಮಾನದಿಂದ ಅಮಿತ್ ಶಾ ವಿದ್ಯಾರ್ಥಿಗಳ ಸ್ವಾಗತ ಸ್ವೀಕಾರ ಮಾಡಿದರು.
ನೃಪತುಂಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಭವ್ಯ ಭಾರತದ ಕನಸ್ಸನ್ನ ವಿದ್ಯಾರ್ಥಿಗಳ ಮುಂದೆ ಇಟ್ಟರು. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗುವ ವೇಳೆಗೆ ಭಾರತ ವಿಶ್ವಗುರು ಆಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕೆಲಸ ಮಾಡ್ತಿದ್ದಾರೆ ಅಂತ ತಿಳಿಸಿದ್ರು. ಯುವ ಸಮೂಹ ಸಣ್ಣ ಸಣ್ಣ ವಿಚಾರಗಳ ಮೂಲಕ ಸಂಕಲ್ಪ ಮಾಡಬೇಕು ಅಂತ ಕರೆ ನೀಡಿದರು. ಇದನ್ನೂ ಓದಿ: ಪ್ರತಿಯೊಬ್ಬರು ಪರಸ್ಪರ ಧರ್ಮವನ್ನು ಗೌರವಿಸಬೇಕು: ನಿತೀಶ್ ಕುಮಾರ್
ಜಮ್ಮು-ಕಾಶ್ಮೀರದ 370 ರದ್ದು ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದು ಪ್ರಧಾನಿ ಮೋದಿ ಅವರು ಅಂತ ಮೋದಿ ಕಾರ್ಯ ಶ್ಲಾಘಿಸಿದರು. ದೇಶದಲ್ಲಿ ಮೆಡಿಕಲ್ ಕಾಲೇಜು, ಕೇಂದ್ರೀಯ ವಿವಿಗಳು, ಐಐಟಿಗಳನ್ನ ಹೊಸದಾಗಿ ದೇಶಾದ್ಯಂತ ಮೋದಿ ಅವರು ಸ್ಥಾಪನೆ ಮಾಡಿದ್ದಾರೆ ಅಂತ ತಿಳಿಸಿದರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿರೋದಕ್ಕೆ ಅಭಿನಂದನೆ ಸಲ್ಲಿಸಿದರು. ನದಿ ಜೋಡಣೆ ಕೆಲಸ ಮೋದಿ ಅವರು ಮಾಡ್ತಿದ್ದಾರೆ. ಗಡಿ ವಿವಾದಗಳಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಅಂತ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮಿತ್ ಶಾರಿಗೆ ಮೈಸೂರು ಪೇಟಾ ತೊಡಿಸಿ, ಸರಸ್ವತಿ ಪ್ರತಿಮೆ ನೀಡಿ ಸನ್ಮಾನಿಸಲಾಯ್ತು. ಇದೇ ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಇ-ಬೀಟ್ ವ್ಯವಸ್ಥೆಗೆ ವಚ್ರ್ಯುಯಲ್ ಮೂಲಕ ಅಮಿತ್ ಶಾ ಚಾಲನೆ ಕೊಟ್ಟರು.