ಮುಂಬೈ: ಕೇಂದ್ರ ಸರ್ಕಾರವು ಭಾರತೀಯ ಆಡಳಿತ ಸೇವೆಯಿಂದ (IAS) ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ (Puja Khedkar) ಅವರನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿದೆ ಎಂದು ವರದಿಯಾಗಿದೆ.
1954ರ ಐಎಎಸ್ (Exam) ನಿಯಮಗಳ 12ನೇ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರವು (Central Govt) ಐಎಎಸ್ ಸೇವೆಯಿಂದ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್ ಗರಂ
ವಿಶೇಷಚೇತನ ಹಾಗೂ ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (UPSC) ಈ ಹಿಂದೆ ಎಫ್ಐಆರ್ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೂಜಾ ಅವರ ಆಯ್ಕೆಯನ್ನು ವಜಾಗೊಳಿಸಿದೆ. ಇದನ್ನೂ ಓದಿ: Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಎಫ್ಐಆರ್!
ತಮ್ಮ ಉದ್ಯೋಗ ಭದ್ರತೆಗಾಗಿ ಪೂಜಾ ಖೇಡ್ಕರ್ ನಕಲಿ ದಾಖಲೆ, ಪ್ರಮಾಣ ಪತ್ರಗಳನ್ನ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಖಾಸಗಿ ಆಡಿ ಕಾರಿಗೆ ರೆಡ್ಲೈಟ್ ಮತ್ತು ಮಹಾರಾಷ್ಟ್ರ ಸರ್ಕಾರದ (Maharashtra Government) ಲಾಂಛನ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿತ್ತು. ವಿಚಾರಣೆಗಾಗಿ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ಬಳಿಕ ಜು.18 ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದ ಯುಪಿಎಸ್ಸಿ, ಜು.19ರಂದು ಎಫ್ಐಆರ್ ದಾಖಲಿಸಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಪೂಜಾ ಖೇಡ್ಕರ್ ಅವರನ್ನ ಐಎಎಸ್ ಸೇವಯಿಂದಲೇ ವಜಾಗೊಳಿಸಿದೆ. ಅಲ್ಲದೇ ಮುಂದಿನ ಎಲ್ಲಾ ಯುಪಿಎಸ್ಸಿ ಪರೀಕ್ಷೆಗಳಿಗೆ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಪೂಜಾ ಮೇಲಿನ ಆರೋಪ ಏನು?
2023ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಅವರು ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವಿಕಲತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಅಂಗವೈಕಲ್ಯ ಕೋಟಾ ಬಳಸಿಕೊಂಡಿದ್ದರು. ಅಲ್ಲದೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಾತಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನಕಲು ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮುನ್ನವೇ ಸವಲತ್ತುಗಳಿಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಅವರ ವಿರುದ್ಧ ಇದೆ.
ದೆಹಲಿ ಪೊಲೀಸರ ವರದಿಯಲ್ಲೇನಿದೆ?
ಕಳೆದ ವಾರ ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ಗೆ 2ನೇ ಹಂತದ ಸ್ಥಿತಿ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಪೂಜಾ ಅಂಕವಿಲತೆ ಎಂದು ಸಲ್ಲಿಸಿದ್ದ ವರದಿಗಳು ನಕಲಿ ಎಂದು ಉಲ್ಲೇಖಿಸಿದ್ದರು. ಯುಪಿಎಸ್ಸಿ ಪರೀಕ್ಷೆಗಾಗಿ ಆಕೆ 2 ಪ್ರತ್ಯೇಕ ಅಂಗವಿಕಲತೆ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು