ನವದೆಹಲಿ: ಕೋವಿಡ್ 19 ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಜ್ಯಗಳ ರಾಜ್ಯ ವಿಪತ್ತು ಪರಿಹಾರ ನಿಧಿ(SDRF) ಖಾತೆಗೆ ಕೇಂದ್ರ ಗೃಹ ಇಲಾಖೆ 7,274 ಕೋಟಿ ರೂ. ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ ಗೃಹ ಇಲಾಖೆ ಮುಂಗಡವಾಗಿ 1,599 ಕೋಟಿ ಹಣ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡಬೇಕು: ಬಿ.ಸಿ ಪಾಟೀಲ್
ಕೋವಿಡ್ ಮತ್ತು ಇತರೆ ಆರ್ಥಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಹಣಕಾಸಿನ ನೆರವು ನೀಡುತ್ತಿದ್ದು ಸದ್ಯ ರಾಜ್ಯಗಳ ಎಸ್ಡಿಆರ್ಎಫ್ ಖಾತೆಯಲ್ಲಿ 2021-22 ಅವಧಿಯಲ್ಲಿ 23,186ಕೋಟಿ ಲಭ್ಯವಿದೆ ಎಂದು ಗೃಹ ಇಲಾಖೆ ಹೇಳಿದೆ.
ಕೋವಿಡ್ 19 ನಿಂದ ಮೃತಪಟ್ಟರಿಗೆ SDRF ಮೂಲಕ 50 ಸಾವಿರ ಪರಿಹಾರ ನೀಡುವುದಾಗಿ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಅಫಿಡವಿಟ್ ಮೂಲಕ ಹೇಳಿತ್ತು. ಅದರ ಭಾಗವಾಗಿ ಗೃಹ ಇಲಾಖೆ ಹಣ ವರ್ಗಾವಣೆ ಮಾಡಿದೆ.