ನವದೆಹಲಿ: ಕೇಂದ್ರ ಸಚಿವ ಸಂಪುಟ ಇನ್ನೊಂದು ವಾರದೊಳಗೆ ಪುನಾರಚನೆಯಾಗುವ ಸಾಧ್ಯತೆ ಹೆಚ್ಚಿದೆ. 2019ರ ಲೋಕಸಭೆ ಚುನಾವಣೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಪುನಾರಚನೆ ನಡೆಯಲಿದೆ.
ಮೊನ್ನೆಯಷ್ಟೇ ಎನ್ಡಿಎ ಸೇರಿದ ಜೆಡಿಯು ಮತ್ತು ಅಣ್ಣಾಡಿಎಂಕೆ ಪಕ್ಷಗಳ ತಲಾ ಇಬ್ಬರು ಸಂಸದರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಶಿವಸೇನೆಯ ಒಬ್ಬರಿಗೆ ಮಂತ್ರಿಸ್ಥಾನ ನೀಡುವ ಮೂಲಕ ಅವರ ಕೋಪ ತಣ್ಣಗಾಗಿಸುವ ಪ್ರಯತ್ನ ಕೂಡ ನಡೆದಿದೆ. ಇನ್ನು ಕರ್ನಾಟಕದ ಇಬ್ಬರು ಸಂಸದರು ಮೋದಿ ಸಂಪುಟ ಸೇರುವ ನಿರೀಕ್ಷೆ ಇದೆ.
ಯಡಿಯೂರಪ್ಪ ಆಪ್ತರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಶಿವಕುಮಾರ್ ಉದಾಸಿ, ಸುರೇಶ್ ಅಂಗಡಿ ಪೈಕಿ ಇಬ್ಬರಿಗೆ ಮಂತ್ರಿಗಿರಿಯ ಯೋಗವಿದೆ ಎನ್ನಲಾಗ್ತಿದೆ. ಕರಂದ್ಲಾಜೆ ಸೇರ್ಪಡೆ ಮೂಲಕ ಕರಾವಳಿ ಜಿಲ್ಲೆಗಳ ಮೇಲೆ ಮತ್ತಷ್ಟು ಹಿಡಿತ ಸಾಧಿಸಬಹುದು. ಶ್ರೀರಾಮುಲು ಮೂಲಕ ಎಸ್ಟಿ ಮತಗಳನ್ನು ಗಟ್ಟಿ ಮಾಡಿಕೊಳ್ಳಬಹುದು. ಶಿವಕುಮಾರ್ ಉದಾಸಿ ಅಥವಾ ಸುರೇಶ್ ಅಂಗಡಿ ಮೂಲಕ ಲಿಂಗಾಯತ ಮತಗಳ ಕ್ರೋಢೀಕರಣ ಮಾಡಬಹುದು ಎಂಬ ಲೆಕ್ಕಾಚಾರ ಮೋದಿ ಪಾಳಯದಲ್ಲಿ ನಡೆಯುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರ್ತಿವೆ.
ಪುನಾರಚನೆ ವೇಳೆ ಕಲ್ರಾಜ್ ಮಿಶ್ರಾ ಸೇರಿದಂತೆ ಹಲವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಈ ನಡುವೆ ರೈಲ್ವೆ ದುರಂತಗಳ ಬಳಿಕ ನೈತಿಕ ಹೊಣೆ ಹೊತ್ತು ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಹೆದ್ದಾರಿ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿಗೆ ರೈಲ್ವೆ ಖಾತೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.
ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವ #SureshPrabhu ರಾಜೀನಾಮೆ? ಮೋದಿ ಹೇಳಿದ್ದೇನು? https://t.co/5gIHOCuHaK #IndianRailway #Modi #KaifiyatExpress pic.twitter.com/ykrzBNzEaH
— PublicTV (@publictvnews) August 23, 2017
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬದಲು ಪುನಾರಚನೆಗೆ ಕಸರತ್ತು https://t.co/iwycTgAWFY #Siddaramaiah #CabinetReshuffle #Congress pic.twitter.com/aKsv1zbBhw
— PublicTV (@publictvnews) August 24, 2017