ಕೊಪ್ಪಳ: ಸಿಮೆಂಟ್ ಲಾರಿ ಹಾಗೂ ಬುಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿ (Kushtagi) ತಾಲೂಕಿನ ನಂದಾಪೂರ ಕ್ರಾಸ್ (Nandapura Cross) ಬಳಿ ನಡೆದಿದೆ.
ಮೃತರನ್ನು ಲಿಂಗಸಗೂರು ತಾಲೂಕಿನ ತೊಡಕಿ ಗ್ರಾಮದವರಾದ ಸಿದ್ಧಪ್ಪ ಪೊಲೀಸಗೌಡರ (25), ಅಂಜನಪ್ಪ ಪೊಲೀಸ್ಗೌಡರ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟಿಬೆಟನ್ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ
ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಸಿಮೆಂಟ್ ಮಿಕ್ಸರ್ ಯಂತ್ರದ ಲಾರಿಯನ್ನು ತೆಗೆದುಕೊಂಡು ಕುಷ್ಟಗಿ ಕಡೆಗೆ ಹೊರಟಿದ್ದರು. ಇದೇ ವೇಳೆ ಕುಷ್ಟಗಿ ತರಕಾರಿ ಮಾರುಕಟ್ಟೆಗೆ ಸೌತೆಕಾಯಿ ಹಾಕಿ, ಲಿಂಗಸಗೂರು ಕಡೆಗೆ ಹೊರಟಿದ್ದ ಬುಲೆರೋ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಬುಲೆರೋ ವಾಹನಕ್ಕೆ ಬೆಂಕಿ ಆವರಿಸಿದ್ದು, ಇಬ್ಬರು ಸಜೀವ ದಹನಗೊಂಡಿದ್ದಾರೆ.
ಈ ಕುರಿತು ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಮಾತನಾಡಿ, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರೊಳಗೆ ಬೊಲೆರೋ ವಾಹನದಲ್ಲಿದ್ದ ಇಬ್ಬರೂ ಸಂಪೂರ್ಣ ಸುಟ್ಟು ಕರಕಲಾಗಿದ್ದರು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ತಾವರಗೇರಾ ಪಿಎಸ್ಐ ಸೇರಿದಂತೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ ಅವರು ಭೇಟಿ ನೀಡಿ, ಪರಿಶೀಲಿಸಿದರು.ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ವಿಜಯೇಂದ್ರ