ಕಾರವಾರ: ವೈಯಕ್ತಿಕ ಟೀಕೆ, ಬೆದರಿಕೆಗೆ ನಮ್ಮ ಕಲಾವಿದರು ಹೆದರುವುದಿಲ್ಲ ನಟಿ ತಾರಾ ಹೇಳಿದ್ದಾರೆ.
ಇಂದು ಕಾರವಾರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ಪ್ರಚಾರಕ್ಕೆ ಆಗಮಿಸಿದ ಅವರು ದರ್ಶನ್ ಹಾಗೂ ಯಾಶ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಬೆದರಿಕೆಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ನಟ ಯಶ್ ಹಾಗೂ ದರ್ಶನ್ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಸಿಎಂ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಪಂಚದಲ್ಲಿ ಯಾರೂ ದೊಡ್ಡವರಿಲ್ಲ. ಇಲ್ಲಿ ಎಲ್ಲರೂ ನಿಮಿತ್ತ ಮಾತ್ರ ನಾವು ಎಲ್ಲರನ್ನೂ ನೋಡಿಕೊಳ್ಳುತ್ತೇವೆ. ನಾವು, ನಮ್ಮದು, ನಂದು ಎನ್ನುವುದು ಇರಲು ಸಾಧ್ಯವಿಲ್ಲ. ಇಲ್ಲಿ ಎಲ್ಲರನ್ನೂ ನೋಡಿಕೊಳ್ಳುವವನು ಮೇಲೊಬ್ಬನಿದ್ದಾನೆ. ಯಾರಿಗೆ ಯಾರೂ ಬೆದರಿಕೆ ಹಾಕಿದರೂ ಮೇಲಿದ್ದವನು ಹಾಕಬೇಕು ಅಷ್ಟೇ. ವೈಯಕ್ತಿಕ ಟೀಕೆ, ಬೆದರಿಕೆಗೆ ನಮ್ಮ ಕಲಾವಿದರು ಹೆದರುವುದಿಲ್ಲ ಎಂದರು.
ದರ್ಶನ್, ಯಶ್ ಕೆಲಸವನ್ನು ಇಷ್ಟಪಟ್ಟು ಮಾಡಿದ್ದಾರೆ. ಅವರಿಗೆ ಯಾವುದೇ ಪಕ್ಷ ಕರೆದು ಪ್ರಚಾರ ಮಾಡಲು ಹೇಳಿಲ್ಲ. ಅವರು ಅಂಬರೀಶಣ್ಣನ ಮೇಲಿರುವ ಅಭಿಮಾನ, ಪ್ರೀತಿ ಗೌರವದಿಂದ ಅವರು ಸುಮಲತಾ ಅಮ್ಮನವರಿಗೆ ಕೆಲಸ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರು, ಎಲ್ಲರಿಗಿಂತ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಇಂತಹ ಮಾತುಗಳು ಅವರಿಗೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ಚುನಾವಣೆ ಕುರುಕ್ಷೇತ್ರ ಗೆಲ್ಲಬೇಕು ಎಂಬ ಆಕಾಂಕ್ಷೆ ಎಲ್ಲರಿಗೂ ಇರಬೇಕು. ವೈಯಕ್ತಿಕ ಟೀಕೆಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾರಾ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು:
ಬಿಜೆಪಿ ಸ್ಟಾರ್ ಪ್ರಚಾರಕಿ ತಾರಾ ಅವರು ಕಾರವಾರದ ಅರಬ್ಬಿ ಸಮುದ್ರದ ದ್ವೀಪ ಪ್ರದೇಶಗಳಿಗೆ ಬೋಟಿನಲ್ಲಿ ತೆರಳಿ ಪ್ರಚಾರ ಕೈಗೊಂಡರು. ಕಾರವಾರದ ರಸ್ತೆಗಳ ಅಂಗಡಿಗಳಿಗೆ ತೆರಳಿ ಬಿಜೆಪಿ ಪರ ಮತಯಾಚಿಸಿದರು. ಈ ವೇಳೆ ಹಣ್ಣಿನ ಅಂಗಡಿಯಲ್ಲೂ ಕೂಡ ಮತಯಾಚಿಸಿದರು. ಮತ ನೀಡಿ ಎಂದು ಕೇಳಿದಾಗ ಹಣ್ಣಿನ ಅಂಗಡಿಯ ಮಾಲೀಕರೊಬ್ಬರು ತಾರಾ ಅವರಿಗೆ ಕಲ್ಲಂಗಡಿ ಹಣ್ಣನ್ನು ನೀಡಿದರು. ಕಾರವಾರದ ರಸ್ತೆಯುದ್ದಕ್ಕೂ ಪ್ರಚಾರ ನಡೆಸಿದ ನಟಿ ತಾರಾ ಬಳಿ ನಿಂತು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.