ಬೆಂಗಳೂರು: ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಗೆ ಬೋರ್ಡ್ ಸಿದ್ಧತೆ ಪೂರ್ಣಗೊಳಿಸಿದೆ. ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿದ್ಧತೆಗೆ ಬಗ್ಗೆ ಇವತ್ತು ಸಭೆ ನಡೆಸಿ, ಪರಿಶೀಲನೆ ನಡೆಸಿದರು.
ಮಾರ್ಚ್ 27 ರಿಂದ ಏಪ್ರಿಲ್ 9 ವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 8,48,192 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ 2,879 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷ ಅಂದರೆ ಎಲ್ಲಾ 2,879 ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಿ ಅಕ್ರಮ ತಡೆಗೆ ಕ್ರಮವಹಿಸಲಾಗುತ್ತಿದೆ.
ಎಸ್ಎಸ್ಎಲ್ಸಿ ಮೌಲ್ಯಮಾಪನ ಎಪ್ರಿಲ್ 19 ರಿಂದ ನಡೆಯಲಿದ್ದು ಮೇ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮೌಲ್ಯಮಾಪನ ರಾಜ್ಯಾದ್ಯಂತ 228 ಕೇಂದ್ರಗಳಲ್ಲಿ ನಡೆಯಲಿದೆ. ಈ ವರ್ಷ 79 ಸಾವಿರ ಶಿಕ್ಷಕರು ಮೌಲ್ಯಮಾಪನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದು, ಅಗತ್ಯ 64 ಸಾವಿರ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಮಕ್ಕಳ ಆಂತರಿಕ ಅಂಕ ಆನ್ ಲೈನ್ ಮೂಲಕವೇ ಫೆಬ್ರವರಿ 3ನೇ ವಾರದಲ್ಲಿ ನಮೂದು ಮಾಡಲು ಅವಕಾಶ ನೀಡಲು ಬೋರ್ಡ್ ನಿರ್ಧರಿಸಿದೆ. ಓಎಂಆರ್ ಬದಲು ಆನ್ ಲೈನ್ ಮೂಲಕ ಅಂಕ ನಮೂದು ಮಾಡುವ ಹೊಸ ಪದ್ದತಿ ಇಲಾಖೆ ತರುತ್ತಿದೆ. ಪರೀಕ್ಷಾ ಅಕ್ರಮ ತಡೆಗೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.