– ಬಿಜೆಪಿ ಮುಖಂಡನಿಗೆ ಕೋಟಿ ಕೋಟಿ ವಂಚನೆ
ಬೆಂಗಳೂರು: ವಂಚಕನೊಬ್ಬ ಕಡಿಮೆ ಬಡ್ಡಿಗೆ ಹಣ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ಪಡೆದು ಬಿಜೆಪಿ ಮುಖಂಡನೊಬ್ಬನಿಗೆ ವಂಚಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದ ಹೆಚ್.ರವಿಂದ್ರ ವಂಚನೆಗೊಳಗಾದ ಬಿಜೆಪಿ ಮುಖಂಡ. ಹರಿ ಗೋಪಾಲಕೃಷ್ಣ ನಾಡರ್ ಎಂಬಾತ ಮೋಸ ಮಾಡಿದ್ದಾನೆ. ಈತ ಮೂಲತಃ ತಮಿಳುನಾಡಿನವನಾಗಿದ್ದು, ಹಣ ಕೊಡಿಸುವುದಾಗಿ ಮುಂಗಡವಾಗಿ 4.5 ಕೋಟಿ ಹಣ ಪಡೆದು ವಂಚಿಸಿದ್ದಾನೆಂದು ರವೀಂದ್ರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯಕ್ಕೆ ಪ್ರಕರಣವನ್ನ ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಆರೋಪಿ ಹರಿ ಗೋಪಾಲಕೃಷ್ಣ ನಾಡರ್ ಬಂಧನವಾಗಿ ಜಾಮೀನಿನ ಮೇಲೆ ಹೊರಗಡೆಗೆ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಹರಿ ನಾಡರ್ ಕಡಿಮೆ ಬಡ್ಡಿ ದರದಲ್ಲಿ 150 ಕೋಟಿ ಹಣ ಕೊಡಿಸುವುದಾಗಿ ನಂಬಿಸಿದ್ದಾನೆ. ನಂತರ ಹಣವನ್ನು ಕೊಡಿಸದೆ ರವೀಂದ್ರ ಅವರ ಬಳಿ ಪಡೆದುಕೊಂಡ 4.5 ಕೋಟಿ ಹಣವನ್ನು ವಾಪಸ್ ಕೊಡದೇ ವಂಚನೆ ಮಾಡಿದ್ದಾನೆ. ಈ ಘಟನೆ ಸಂಬಂಧ ಪ್ರಮುಖ ಆರೋಪಿ ಹರಿಗೋಪಾಲಕೃಷ್ಣ ನಾಡರ್ ಗೆ ನೋಟಿಸ್ ಕೊಟ್ಡಿದ್ದು, ಬಂದು ವಿಚಾರಣೆಗೆ ಹಾಜರಾಗಿದ್ದಾನೆ.
ವಿಚಾರಣೆ ವೇಳೆ ಈತನ ಜೊತೆ ಸ್ನೇಹಿತರು ಭಾಗಿಯಾಗಿರುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಯ ಮೂವರು ಸ್ನೇಹಿತರು ಚೆನೈ ಮೂಲದವರಾಗಿದ್ದು, ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪ್ರಮುಖ ಆರೋಪಿಯ ಹರಿ ಗೋಪಾಲಕೃಷ್ಣ ನಾಡರ್ ಮಾಹಿತಿ ಮೇರೆಗೆ ಉಳಿದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.