ಭುವನೇಶ್ವರ: ಒಡಿಶಾದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲೂ) ಛತ್ತೀಸಘಡದ ಕಾರಿನಲ್ಲಿ ಬರೋಬ್ಬರಿ 10.90 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ.
ಕಾರು ಕಟಕ್ ನಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ತೆರಳುತ್ತಿತ್ತು. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬಾನ್ವಾರಿ (40), ಪ್ರಹ್ಲಾದ್ (30), ಮೊಹಮ್ಮದ್ ಇಬ್ರಾಹಿಂ (45) ಮತ್ತು ಅವರ ಪತ್ನಿ ನಜ್ಮಾ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾಲ್ಕು ಜನರು ಭಾರೀ ಪ್ರಮಾಣದ ಹಣದೊಂದಿಗೆ ಕಟಕ್ ನಿಂದ ಕಾರಿನಲ್ಲಿ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಇಒಡಬ್ಲ್ಯೂ ಛತ್ತೀಸಘಡ ಪೊಲೀಸರಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ವಾಹನ ತಪಾಸಣೆಗೆಂದು ಮಹಾಸಮುಂದ ಜಿಲ್ಲೆಯಲ್ಲಿ ಟಯೋಟಾ ಕಾರ್ ನಿಂತಿತ್ತು. ಈ ವೇಳೆ ಪೊಲೀಸರು ತಪಾಸಣೆ ಮಾಡುವ ವೇಳೆ ಕಾರಿನ ಹಿಂಭಾಗದ ಸೀಟಿನ ಒಳಗಡೆ ರೂ. 2000, 500, ರೂ. 200 ಮತ್ತು ರೂ 100 ಮೌಲ್ಯದ ನೋಟುಗಳು ಪತ್ತೆಯಾಗಿದ್ದು, ಒಟ್ಟು 10.90 ಕೋಟಿ ರೂ. ಪತ್ತೆಯಾಗಿದೆ ಎಂದು ಡಿಜಿಪಿ ಆರ್ಪಿ ಶರ್ಮಾ ಅವರು ತಿಳಿಸಿದ್ದಾರೆ.
ಎಲ್ಲರೂ ಆಗ್ರಾ ನಿವಾಸಿಗಳಿದ್ದು, ಉತ್ತರ ಪ್ರದೇಶದ ಆರ್ ಟಿಓ ನೋಂದಣಿ ಹೊಂದಿರುವ ಕಾರಿನಲ್ಲಿ ಫೆಬ್ರವರಿ 17 ರಂದು ಕಟಕ್ ನಿಂದ ಹೊರಟಿದ್ದರು. ಸದ್ಯಕ್ಕೆ ನಾಲ್ವರನ್ನು ವಶಕ್ಕೆ ಪಡೆದು, ಪತ್ತೆಯಾದ ಹಣ ಯಾವ ವ್ಯಕ್ತಿ ನೀಡಿದ್ದು, ಯಾವ ಉದ್ದೇಶಕ್ಕಾಗಿ ಹಣ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ವಿಚಾರಣೆ ಮಾಡಲಾಗುತ್ತಿದೆ. ಕಾರಿನಲ್ಲಿ ಸಿಕ್ಕ 10.90 ಕೋಟಿ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv