ಗದಗ: ಕಾವೇರಿ ನೀರಿಗಾಗಿ (Cauvery water) ನಡೆಯುತ್ತಿರುವ ಹೋರಾಟಕ್ಕೆ ಗದಗದ ತೋಂಟದಾರ್ಯ ಮಠದ ಶ್ರೀಗಳು (Tontadarya Swamiji) ಬೆಂಬಲ ಸೂಚಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ರೈತರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.
ತೋಂಟದಾರ್ಯ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೋರಾಟಗಾರರು ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿ ಮಾಡದೇ ಹೋರಾಟ ಮಾಡಬೇಕಿದೆ. ಶಾಂತಿಯುತ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ. ತಮಿಳುನಾಡಿನವರೂ ಬರಗಾಲ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಇದನ್ನು ಅರಿತು ಸರ್ಕಾರದ ಮೇಲೆ ಒತ್ತಡ ಹಾಕಬಾರದು ಎಂದು ಹೇಳಿದರು.
ಕುಡಿಯುವ ನೀರು ಬಹಳ ಮುಖ್ಯ ಎಂಬುದನ್ನು ಗಮನಿಸಬೇಕು. ತಮಿಳುನಾಡಿನ ಜನ ಪ್ರಜ್ಞಾಪೂರ್ವಕ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ. ಮಳೆ ಅಭಾವ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕೆಆರ್ಎಸ್ ಜಲಾಶಯವಷ್ಟೇ ಅಲ್ಲ ಇತರ ಎಲ್ಲಾ ಜಲಾಶಯಗಳಲ್ಲೂ ನೀರು ಕಡಿಮೆಯಾಗಿದೆ. ಮಳೆಯ ಅಭಾವದಿಂದ ಕರ್ನಾಟಕದ ಸಮಸ್ತ ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕ ಸೇವಾ ಸಂಸ್ಥೆಗಳು, ಮಠಮಾನ್ಯಗಳು, ಸರ್ಕಾರ ರೈತರ ನೆರವಿಗೆ ಬರಬೇಕು. ಇನ್ನು ಸರ್ಕಾರ ಸಹ ಜಾಣ್ಮೆ ಪ್ರದರ್ಶಿಸಿ ಸಾರ್ವಜನಿಕರ ಸಂಕಷ್ಟ ನೀಗಿಸಬೇಕು ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕಾವೇರಿ, ದಾವಣಗೆರೆಯಲ್ಲಿ ಭದ್ರಾ ನೀರಿಗಾಗಿ ಬೀದಿಗಿಳಿದ ರೈತರು
ಈ ವರ್ಷ ಮಳೆಯ ಅಭಾವದಿಂದ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ರೈತರು ಚಿಂತಾಕ್ರಾಂತರಾಗಿದ್ದಾರೆ. ಜಲಾಶಯಗಳಿಂದ ನಗರಗಳಿಗೆ ಕುಡಿಯುವ ನೀರಿನ ಪೂರೈಕೆಯಾಗುವುದು ಕಷ್ಟದ ಕೆಲಸ. ಈ ಸಂದರ್ಭಗಳಲ್ಲಿ ಕಾವೇರಿ ಸಮಸ್ಯೆ ಕಾಡುತ್ತಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರು ಅತ್ಯಂತ ಕೆಳ ಮಟ್ಟಕ್ಕೆ ಹೋಗಿದೆ. ಈಗಿರುವ ನೀರು ಮೈಸೂರು, ಮಂಡ್ಯ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಮಾತ್ರ ಸಾಧ್ಯವಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟದ ಕೆಲಸ. ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯ ನೀರು ಬಿಡಲು ಸೂಚಿಸಿದೆ. ಜಲಾಶಯದಲ್ಲಿ ನೀರು ಇಲ್ಲದಿರುವುದು ಜನರಿಗೆ ಬರಸಿಡಿಲ ಆಘಾತ ನೀಡಿದೆ. ಇಂತಹ ಸಂದರ್ಭದಲ್ಲಿ ರೈತರು ಹೋರಾಟ ಮಾಡಬೇಕಾಗಿರುವುದು ಅವಶ್ಯಕ ಎಂದು ಗದಗದ ಜಗದ್ಗುರು ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಹೇಳಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್
Web Stories