ಬಾಗಲಕೋಟೆ: ಸಾಲು ಸಾಲಾಗಿ ಮಾರಾಟಕ್ಕೆ ಸಿದ್ದವಾಗಿ ನಿಂತಿರುವ ಎತ್ತು, ಹೋರಿಗಳು. ತಮ್ಮ ತಮ್ಮ ಎತ್ತುಗಳನ್ನು ಹಿಡಿದು ನಿಂತಿರುವ ರೈತರು. ಮಾರಾಟವಾದ ಎತ್ತುಗಳ ಮೈಮೇಲೆ ಬಣ್ಣದೋಕುಳಿ. ಇನ್ನೊಂದೆಡೆ ಕಿಲಾರಿ ಹೋರಿ, ಎತ್ತುಗಳ ಪ್ರದರ್ಶನ ಸ್ಪರ್ಧೆ. ಪಶು ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳಿಂದ ಜಾನುವಾರುಗಳ ಆಯ್ಕೆ.
ಬಾಗಲಕೋಟೆ (Bagalkote) ಮೋಟಗಿ ಬಸವೇಶ್ವರ ಜಾತ್ರೆ ಪ್ರಯುಕ್ತ ಜಾನುವಾರು ಜಾತ್ರೆ ನಡೆಯುತ್ತಿದೆ. ಕೇಸನೂರು ಗ್ರಾಮದ ವ್ಯಾಪ್ತಿಯಲ್ಲಿ ಜಾನುವಾರು ಜಾತ್ರೆ (Cattle fair) ಆಯೋಜಿಸಿದ್ದು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಗದಗ ಭಾಗದಿಂದಲೂ ಜಾನುವಾರುಗಳನ್ನು ತರಲಾಗಿದೆ.
ಈ ಹಿಂದೆ ಪ್ರತಿ ವರ್ಷ 6 ಸಾವಿರಕ್ಕೂ ಅಧಿಕ ಜಾನುವಾರುಗಳು ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದವು. ಆದರೆ ಈ ವರ್ಷ 3-4 ಸಾವಿರಕ್ಕೆ ಇಳಿಕೆಯಾಗಿದೆ. ಯಂತ್ರಾಧರಿತ ಕೃಷಿ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗಿದ್ದರಿಂದ ಕಡಿಮೆ ಸಂಖ್ಯೆಯ ಜಾನುವಾರುಗಳು ಜಾತ್ರೆಯಲ್ಲಿ ಭಾಗಿಯಾಗಿವೆ. ಇದನ್ನೂ ಓದಿ: ಶಾಸಕರ ಪಿಎ ಕಿರುಕುಳಕ್ಕೆ ಡೆತ್ನೋಟ್ ಬರೆದಿಟ್ಟು ಸರ್ಕಾರಿ ನೌಕರ ನಾಪತ್ತೆ
ಮೋಟಗಿ ಬಸವೇಶ್ವರ ಜಾತ್ರಾ ಸಮಿತಿ ಎಪಿಎಂಸಿ ಹಾಗೂ ಪಶುಸಂಗೋಪನಾ ಇಲಾಖೆ ವತಿಯಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. 4 ದಿನದ ಜಾನುವಾರು ಜಾತ್ರೆಯಲ್ಲಿ ಮೂಡಲ, ಕಿಲಾರಿ, ಹಳ್ಳಿಕಾರ ಕರಸುಂಡಿಯಂತಹ ಯೋಗ್ಯ ತಳಿಗಳೂ ಇಲ್ಲಿ ಬಂದಿವೆ. ವಿವಿಧ ತಳಿಯ ಹಸುಗಳು ಮಾರಾಟಕ್ಕೆ ಬಂದಿವೆ. ಆದರೆ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದ್ದು ರೈತರಿಗೆ ಬೇಸರ ತಂದಿದೆ.
ಈ ವರ್ಷ ಹೋರಿಗಳು 75 ಸಾವಿರದಿಂದ 3 ಲಕ್ಷ ರೂ. ವರೆಗೆ ಮಾರಾಟವಾಗಿವೆ. ಆಕಳುಗಳು 15 ರಿಂದ 50 ಸಾವಿರ ರೂ.ವರೆಗೆ ಒಟ್ಟು 141 ಹೋರಿಗಳು ಮಾರಾಟವಾಗಿವೆ. ಉತ್ತಮ ತಳಿಯ ಜಾನುವಾರುಗಳಿಗೆ ಏಳು ವಿಭಾಗದಲ್ಲಿ ಬಹುಮಾನ ನೀಡಲಾಗುತ್ತದೆ. ಇದನ್ನೂ ಓದಿ: ಕೇಂದ್ರದ ಸಬ್ಸಿಡಿ ಯೂರಿಯಾ ಗೊಬ್ಬರ ಅನ್ಯ ರಾಜ್ಯಕ್ಕೆ ಮಾರಾಟ – 7 ಮಂದಿ ಅರೆಸ್ಟ್


