ಬೆಂಗಳೂರು: ಜಾತಿಗಣತಿ (Caste Census) ವರದಿ ಲೀಕ್ ಆಗಿಲ್ಲ. ವಿರೋಧ ಮಾಡುವವರು ವರದಿ ಬಂದಾಗ ಅದನ್ನು ಓದಿದ ಮೇಲೆ ಮಾತಾಡಲಿ ಎನ್ನುವ ಮೂಲಕ ಜಾತಿಗಣತಿ ವಿರೋಧ ಮಾಡುವವರಿಗೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿರುಗೇಟು ಕೊಟ್ಟರು.
ಜನವರಿಯಲ್ಲಿ ಅಹಿಂದ ಸಮಾವೇಶ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸಂಘಟನೆಗೋಸ್ಕರ ಸಮಾವೇಶ ಮಾಡ್ತಾರೆ. ಲಿಂಗಾಯತರು ಸಮಾವೇಶ ಮಾಡಿದ್ರು. ಅದರಂತೆ ಅಹಿಂದಾ ಸಮಾವೇಶ ಆಗ್ತಿದೆ. ಅನೇಕ ಬೇಡಿಕೆಗಳು ಇರಲಿದೆ. ಇದು ಲಿಂಗಾಯತ ಸಮಾವೇಶಕ್ಕೆ ಕೌಂಟರ್ ಅಲ್ಲ. ಅದು ಸಂಘಟನೆ ವಿಚಾರವಾಗಿ ಆಗುವ ಸಮಾವೇಶ ಎಂದರು. ಇದನ್ನೂ ಓದಿ: ಕನ್ನಡ ಪರ ಹೋರಾಟಗಾರರ ಮೇಲಿನ ಕೇಸು ವಾಪಸ್ ಪಡೆಯಿರಿ: ಬಿ.ಕೆ.ಹರಿಪ್ರಸಾದ್
ಜಾತಿಗಣತಿ ವರದಿ ಸಿದ್ದವಾಗಿದೆ. ಅದು ಕೇವಲ ಜಾತಿಗೆ ಸೀಮಿತ ಆಗಿರುವ ಗಣತಿ ಅಲ್ಲ. ಸಾಮಾಜಿಕ, ಅರ್ಥಿಕ ಗಣತಿ ಅದು. 54 ಅಂಶಗಳಲ್ಲಿ ಗಣತಿ ಆಗಿದೆ. ಯಾರು ಪರ, ವಿರೋಧ ಮಾಡೋದು ಮುಖ್ಯ ಅಲ್ಲ. ಪ್ರಜಾಪ್ರಭುತ್ವ ಇದು. ವಿರೋಧ-ಪರ ಸಹಜ. ಮೊದಲು ವರದಿ ಸ್ವೀಕಾರ ಮಾಡೋಣ. ಮೊದಲು ವರದಿ ಓದಲಿ ಆಮೇಲೆ ವಿರೋಧದ ಬಗ್ಗೆ ನೋಡೋಣ ಎಂದು ತಿಳಿಸಿದರು.
ವರದಿ ಬಂದ ಮೇಲೆ ಸಿಎಂ ಮುಂದಿನ ನಿರ್ಧಾರ ಮಾಡ್ತಾರೆ. ವರದಿ ಸ್ವೀಕಾರ ಮಾಡ್ತೀವಿ. ವರದಿ ಸ್ವೀಕಾರ ಮಾಡಬೇಡಿ ಅನ್ನೋದು ಸರಿಯಲ್ಲ. ಜಾತಿಗಣತಿ ವರದಿ ಲೀಕ್ ಆಗಿಲ್ಲ. ನಾನು ಇಲಾಖೆ ಮಂತ್ರಿ ಆಗಿ ಹೇಳ್ತಿದ್ದೇನೆ. ವರದಿ ಎಲ್ಲೂ ಲೀಕ್ ಆಗಿಲ್ಲ. ಮೊದಲು ವರದಿ ಸ್ವೀಕಾರ ಮಾಡ್ತೀವಿ. ಆಮೇಲೆ ಚರ್ಚೆ ಮಾಡಲಿ. ಇದು ಲೋಕಸಭೆ ಚುನಾವಣೆಯ ವಿಷಯ ಅಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂತರಾಜು ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಮಟ್ಟದ ಅಹಿಂದಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್
ನಾವು ಯಾವುದೇ ಏಜೆನ್ಸಿಗೆ ವರದಿ ಮಾಡಲು ಕೊಟ್ಟಿಲ್ಲ. ಶಿಕ್ಷಕರು ಗಣತಿ ಮಾಡಿದ್ದಾರೆ. ಎಲ್ಲಾ ಮಾಹಿತಿ ಗಣತಿಯಲ್ಲಿ ಇದೆ. ನಮ್ಮ ಮನೆಗೆ ಬಂದಿಲ್ಲ. ಎಲ್ಲೋ ಕೂತು ವರದಿ ಮಾಡಿದ್ದಾರೆ ಅನ್ನೋದು ಸರಿಯಲ್ಲ. ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸೋದು ಬೇಡ. ಡಿ.ಕೆ.ಶಿವಕುಮಾರ್ ಕೂಡಾ ವರದಿಗೆ ವಿರೋಧ ಇಲ್ಲ ಅಂತಾ ಹೇಳಿದ್ದಾರೆ. ಈಗಾಗಲೇ ಸಿಎಂ ವರದಿ ಸ್ವೀಕಾರ ಮಾಡೋದಾಗಿ ಹೇಳಿದ್ದಾರೆ. ಹೀಗಾಗಿ ವರದಿ ಬರೋವರೆಗೂ ವಿರೋಧ ಮಾಡೋರು ಕಾಯಲಿ ಎಂದರು.