ಉಡುಪಿ: ಸಹಬಾಳ್ವೆ ಸಂಘಟನೆ ನೇತೃತ್ವದಲ್ಲಿ ನಡೆದ ಸರ್ವ ಜನೋತ್ಸವ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸು ದಾಖಲಾಗಿದೆ.
ಹಿಂದೂ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಸಹಬಾಳ್ವೆ ಅಧ್ಯಕ್ಷ ಸಹಿತ ಐವರ ಮೇಲೆ ಪ್ರಕರಣ ದಾಖಲಾಗಿದೆ. ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಹಿರಿಯ ಪತ್ರಕರ್ತ-ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಜಿ.ಎನ್ ನಾಗರಾಜ್, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಅವರ ಮೇಲೆ ಚುನಾವಣಾ ಆಯೋಗ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಪ್ರಕರಣ ದಾಖಲು ಮಾಡಿಕೊಂಡಿದೆ. ಇದನ್ನೂ ಓದಿ:ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು
ಉಡುಪಿಯಲ್ಲಿ ನಡೆದ ಸರ್ವಜನೋತ್ಸವದಲ್ಲಿ ದಿನೇಶ್ ಅಮೀನ್ ಮಟ್ಟು ಮತ್ತು ಇತರರು ಮಾ. 17 ರಂದು ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿ ನಡೆದ ಸಹಬಾಳ್ವೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಚುನಾವಣಾ ಪ್ರಚಾರದ ಜೊತೆಗೆ ಧರ್ಮಗಳ ನಿಂದನೆ ಮಾಡಿದ್ದರು. ಪ್ರಧಾನಿ ಮೋದಿ, ಪೇಜಾವರಶ್ರೀ, ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದರು. ಹಿಂದೂ ಧರ್ಮದ ಹೆಸರು ತೆಗೆದು ಟೀಕೆ ಮಾಡಿದ್ದರು.
ಬಳಿಕ ಯಾರಿಗೆ ಮತಹಾಕಿ, ಯಾರಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಚುನಾವಣಾ ವೀಕ್ಷಣಾಧಿಕಾರಿಗಳು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.