ಬಾಗಲಕೋಟೆ: ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಿಧಾನಸಭೆ ವಿಪಕ್ಷ ಉಪ ನಾಯಕ ಬಿಜೆಪಿ ಶಾಸಕ ಗೋವಿಂದ ಕಾರಜೋಳರ ಮಗ ಅರುಣ್ ಕಾರಜೋಳ ಪೊಲೀಸರಿಗೆ ಅವಾಜ್ ಹಾಕಿರುವ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ಜಿಲ್ಲೆಯ ಮುಧೋಳ ನಗರದಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದ ಅರುಣ್ಗೆ ಇಲ್ಲಿ ಕಾರು ನಿಲ್ಲಿಸುವಂತಿಲ್ಲ ಎಂದು ಸಂಚಾರಿ ಪೊಲೀಸ್ ಪೇದೆ ಮಲ್ಲೇಶ್ ಲಮಾಣಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಶಾಸಕರ ಮಗ ಪೇದೆಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಕಾರಜೋಗಳ ಬೆಂಬಲಿಗರನ್ನು ಟ್ರಾಫಿಕ್ ಪೊಲೀಸ್ ನೇರವಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಕೋಪ ಗೊಂಡ ಅರುಣ್ ಕಾರಜೋಳ ಅವರು ಫೋನ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ.
ಕರ್ತವ್ಯ ನಿರತ ಪೇದೆಗೆ ಅಡ್ಡಿ ಪಡಿಸಿ, ಅಶ್ಲೀಲ ಪದ ಬಳಕೆ ಮಾಡಿದ ಕಾರಣ ಸದ್ಯ ಸಂಚಾರಿ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಚಾರಿ ಪೇದೆ ಮಲ್ಲೇಶ್ ಲಮಾಣಿ ನೀಡಿದ ದೂರಿನ ಅನ್ವಯ ಅರುಣ್ ವಿರುದ್ಧ ಐಪಿಸಿ ಸೆಕ್ಷನ್ 353 ಮತ್ತು 188 ಅಡಿ ಪ್ರಕರಣ ದಾಖಲಾಗಿದೆ.