ಚಿಕ್ಕಬಳ್ಳಾಪುರ: ಭಾರತ್ ಲಾಕ್ ಡೌನ್ ಉಲ್ಲಂಘಿಸಿ ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಜಯನಗರ, ಚಾಮರಾಜಪೇಟೆಯಿಂದ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯಕ್ಕೆ ಆಗಮಿಸಿದ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದ ನಂತರ ಕದ್ದುಮುಚ್ಚಿ ಪಾದರಾಯನಪುರ ಹಾಗೂ ಚಾಮರಾಜಪೇಟೆಯ ತಲಾ ಇಬ್ಬರು ಹಾಗೂ ಜಯನಗರದ ಓರ್ವ ಸೇರಿ ಐದು ಮಂದಿ ಆಟೋ ಮೂಲಕ ಮರಾಠಿಪಾಳ್ಯದ ಸಂಬಂಧಿಕರ ಮನೆಗೆ ಆಗಮಿಸಿದ್ರು. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು 5 ಮಂದಿಯನ್ನ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದ್ದಾರೆ. ಈ ಐದು ಮಂದಿ ವಿರುದ್ಧವೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಗೌರಿಬಿದನೂರು ತಾಲೂಕು ಡಿ ಪಾಳ್ಯ ಗ್ರಾಮದ 4 ಮಂದಿ ಹಿಂದೂಪುರಕ್ಕೆ ಹೋಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಾಸ್ಸಾಗಿದ್ರು. ಹೀಗಾಗಿ ಮಾಹಿತಿ ತಿಳಿದ ಪೊಲೀಸರ 4 ಮಂದಿಯನ್ನ ಕ್ವಾರಂಟೈನ್ ಗೆ ಓಳಪಡಿಸಿದ್ರು. ಈ 4 ಮಂದಿಯ ಗಂಟಲ ದ್ರವದ ಡೆಸ್ಟ್ ಮಾಡಿಸಿದ್ದು ನೆಗೆಟಿವ್ ಬಂದಿದೆ.
ಲಾಕ್ ಡೌನ್ ಉಲ್ಲಂಘಿಸಿ ನೆರೆಯ ರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ 4 ಮಂದಿ ವಿರುದ್ಧ ಕೂಡ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 9 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 168, 169, 170 ಅಡಿ ಪ್ರಕರಣ ದಾಖಲಿಸಲಾಗಿದೆ.