ತುಮಕೂರು: ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್, ಅಮೃತೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾದವನಾಯಕ್, ಸಬ್ಇನ್ಸ್ಪೆಕ್ಟರ್ ಶವಂತ್ಗೌಡ, ಹೆಡ್ ಕಾನ್ಸ್ಟೇಬಲ್ ದಯಾನಂದ್ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ವಾಟರ್ಮ್ಯಾನ್ ಪಿ.ಜಿ ಗಂಗಾಧರ್ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಲ್ಗಳಿಗೆ ಇಲಾಖೆ ಮಾಹಿತಿ ರವಾನೆ – ಐವರು ಪೊಲೀಸ್ ಸಿಬ್ಬಂದಿ ಅಮಾನತು
‘ಮಾರ್ಚ್ 21ರಂದು ವಾಟರ್ಮ್ಯಾನ್ ಕೆಲಸಕ್ಕೆ ಹೋಗುವಾಗ ರಾಘವನ ಹೊಸೂರು ಕ್ರಾಸ್ ಬಳಿ ಸಬ್ಇನ್ಸ್ಪೆಕ್ಟರ್ ಶವಂತ್ಗೌಡ, ಹೆಡ್ ಕಾನ್ಸ್ಟೇಬಲ್ ದಯಾನಂದ್ ನನ್ನನ್ನು ತಡೆದು ನಿಲ್ಲಿಸಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕಿದೆ ಎಂದು ಕುಣಿಗಲ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಎಲ್ಲರೂ ಸೇರಿ ಹೊಡೆದಿದ್ದಾರೆ. ಹಲ್ಲೆಯ ನಂತರ ಅಮೃತೂರು ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆ ವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು ಎಂದು ಗಂಗಾಧರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ನೇಹಿತರಾದ ನವೀನ, ಶಿವಕುಮಾರ್ ಮುಖಾಂತರ ನಮ್ಮ ಕುಟುಂಬದವರಿಗೆ ಈ ಮಾಹಿತಿ ತಿಳಿದಿದೆ. ನಂತರ ಅಮೃತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸಹ ತಿಳಿಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ: ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ