ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಅಸ್ಸಾಂ ಮುಖ್ಯಮಂತ್ರಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಟಿಪಿಸಿಸಿ ಅಧ್ಯಕ್ಷ, ಸಂಸದ ಮಲ್ಕಾಜ್ಗಿರಿ ಎ ರೇವಂತ್ ರೆಡ್ಡಿ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ಮತ್ತು 505 (2)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿಯ ಹೇಳಿಕೆಗಳು ಮಹಿಳೆಗೆ ಅವಮಾನಕರವಾಗಿದೆ. ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಬಂಧಿಸಲು ಏಕೆ ಆದೇಶಿಸಲಿಲ್ಲ. ಬಿಜೆಪಿ ಹಿಮಂತ ಬಿಸ್ವಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಆದರೆ ಬಿಜೆಪಿ ಅಸ್ಸಾಂ ಮುಖ್ಯಮಂತ್ರಿಯ ಟೀಕೆಗಳನ್ನು ಬೆಂಬಲಿಸುತ್ತಿದೆ ಎಂದು ರೇವಂತ್ ಹೇಳಿದ್ದಾರೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ
ಗಾಂಧಿ ಕುಟುಂಬಕ್ಕೆ ಅವಮಾನ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಈ ದೇಶದ ಮಹಿಳೆಯರಿಗೆ ಅವಮಾನವಾಗಿದೆ. ನಮ್ಮ ದೂರು ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಬೇಕು. ಅಸ್ಸಾಂ ಮುಖ್ಯಮಂತ್ರಿಗೆ ತಕ್ಷಣವೇ ನೋಟೀಸ್ ನೀಡಬೇಕು. ಅವರನ್ನು ಬಂಧಿಸುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ
ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು?: ಫೆಬ್ರವರಿ 11ರಂದು ಉತ್ತರಾಖಂಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಹಿಮಂತ ಬಿಸ್ವ ಶರ್ಮಾ, ಭಾರತೀಯ ಸೇನೆಯು ನಡೆಸಿದ್ದ ನಿರ್ದಿಷ್ಟ ದಾಳಿಗೆ (ಸರ್ಜಿಕಲ್ ಸ್ಟ್ರೈಕ್) ಸಾಕ್ಷ್ಯ ಕೇಳಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ ಎಂದು ಪ್ರಶ್ನಿಸಿದ್ದರು.