ಕಾರವಾರ: ಅಯ್ಯಪ್ಪ ಸ್ವಾಮಿ ದೇವಸ್ಥಾನದ (Ayyappa Swamy Temple) ಜಾತ್ರೆಯಲ್ಲಿ ಭಕ್ತರ ಮೇಲೆ ಕಾರು ಹರಿದು ಯುವತಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡ ಘಟನೆ ಸಿದ್ಧಾಪುರದ (Siddapura) ರವೀಂದ್ರ ನಗರದಲ್ಲಿ (Ravindra Nagara) ಮಂಗಳವಾರ ರಾತ್ರಿ ನಡೆದಿದೆ.
ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಮೃತಪಟ್ಟರೆ, ಸಿದ್ದಾಪುರದ ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜಾನನ ಭಟ್ ಗಂಭೀರ ಗಾಯಗೊಂಡಿದ್ದಾರೆ.
ಸಿದ್ದಾಪುರದ ರೋಶನ್ ಫೆರ್ನಾಂಡೀಸ್ ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಈ ದುರಂತ ಸಂಭವಿಸಿದೆ. ಸಿದ್ಧಾಪುರ ತಾಲೂಕು ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಗಂಭೀರ ಗಾಯಗೊಂಡ ಕಲ್ಪನಾ ನಾಯ್ಕ್ ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಹೇಗಾಯ್ತು?
ಮಕರ ಸಂಕ್ರಾಂತಿ ನಿಮಿತ್ತ ಸಿದ್ಧಾಪುರದ ರವೀಂದ್ರ ನಗರದಲ್ಲಿ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಈ ವೇಳೆ ರೋಷನ್ ಕುಡಿದ ಮತ್ತಿನಲ್ಲಿ ತನ್ನ ಇಕೋ ಕಾರನ್ನು ಬೇಕಾಬಿಟ್ಟಿ ಚಲಾಯಿಸಿದ್ದಾನೆ. ಇದನ್ನೂ ಓದಿ: ಗವಿಗಂಗಾಧರನಿಗೆ ಸೂರ್ಯ ಪೂಜೆ ಆಗಿದೆ: ಸೋಮಸುಂದರ್ ದೀಕ್ಷಿತ್
ಭಕ್ತರಿಗೆ ಕಾರನ್ನು ಗುದ್ದಿಸಿದ ನಂತರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಉದ್ರಿಕ್ತ ಜನರು ಕಲ್ಲು ತೂರಾಟ ನಡೆಸಿ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ರೋಷನ್ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.