ಮಂಡ್ಯ: ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಕುಚುಕುಗಳ ರೀತಿ ಇದ್ದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಚಲುವರಾಯಸ್ವಾಮಿ (Chaluvaraya Swamy) ಇದೀಗ ಬದ್ಧ ವೈರಿಗಳಾಗಿ ಬದಲಾಗಿದ್ದಾರೆ. ಇಬ್ಬರ ನಡುವೆ ಈಗ ಒಂದಲ್ಲ ಒಂದು ವಿಚಾರಕ್ಕೆ ಮಾತಿನ ಯುದ್ಧ ನಡೆಯುತ್ತಿದೆ. ಇದೀಗ ಕಾರಿನ (Car) ವಿಚಾರಕ್ಕೆ ಇಬ್ಬರ ನಡುವೆ ವಾಕ್ ಸಮರ ಆರಂಭವಾಗಿದೆ.
ಎರಡು ದಿನಗಳ ಹಿಂದೆ ಕೇಂದ್ರ ಸಚಿಚ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಾರು ವಿಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ನಾನು ಒಬ್ಬ ಕೇಂದ್ರ ಸಚಿವನಾಗಿದ್ದರೂ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡಿಕೊಂಡು ಶಿಷ್ಟಾಚಾರ (Protocol) ಪಾಲನೆ ಮಾಡುತ್ತಿಲ್ಲ ಎಂದು ದೂರಿದ್ದರು.
ನಾನು ದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಬಂದಾಗ ಪೋಟೋಕಾಲ್ ಪ್ರಕಾರ ಕಾರನ್ನು ಕಳಿಸಿಲ್ಲ. ಕೊನೆಗೆ ನಾನು ನನ್ನ ಇಲಾಖೆಯಾದ ಬೃಹತ್ ಕೈಗಾರಿಕೆ ಇಲಾಖೆಯ ಕಾರನ್ನು ತರಿಸಿಕೊಂಡು ಓಡಾಡುತ್ತಿದ್ದೇನೆ ಎಂದಿದ್ದರು. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದರು.
ಚಲುವರಾಯಸ್ವಾಮಿ ಹೇಳಿದ್ದೇನು?
ಕುಮಾರಸ್ವಾಮಿ ಈ ಹೇಳಿಕೆಯ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಇನ್ನೊಂದು ಬಾಂಬ್ನ್ನು ಸಿಡಿಸಿದ್ದಾರೆ. ಕುಮಾರಸ್ವಾಮಿ ನನಗೆ ಕಾರು ಕೊಟ್ಟಿಲ್ಲ ಎಂದು ಹೇಳಿರೋದು ನೋಡಿದ್ರೆ ಅದನ್ನು ಕೇಳಲು ಆಗುತ್ತಿಲ್ಲ. ಕುಮಾರಸ್ವಾಮಿ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಳಸುತ್ತಿದ್ದ ಕಾರನ್ನು ನನಗೆ ಬೇಡ ಅಂದಿದ್ದಾರೆ. ನಾವು ಏನು ಮಾಡಲು ಸಾಧ್ಯ, ಸುಮಲತಾ ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಎಂದಿದ್ದಾರೆ ಗೊತ್ತಿಲ್ಲ. ನಾವು ಕಾರು ಕೊಡಲ್ಲ ಎಂದು ಹೇಳಿಲ್ಲ, ಅವರೇ ಕಾರು ಬೇಡ ಎಂದಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜನ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ʻಶೀಷ್ ಮಹಲ್ʼ ನವೀಕರಣ – ಮೋದಿ ಮತ್ತೆ ಕಿಡಿ
ನಮಗೂ ಸಹ ಹೊಸ ಕಾರು ಬರಲು ಒಂದು ವರ್ಷವಾಗಿದೆ. ಅಲ್ಲಿಯವರೆಗೆ ಹಿಂದೆ ಉಪಯೋಗಿಸುತ್ತಿದ್ದ ಸಚಿವರ ಕಾರನ್ನು ನಾನು ಬಳಸುತ್ತಿದ್ದೆ. ನಾನು ಸಂಸದನಾದ ಬಳಿಕ ಒಂದು ವರ್ಷ ಅಂಬರೀಶ್ ಅವರ ಕಾರನ್ನು ಬಳಸಿದ್ದೆ. ಆ ಮೇಲೆ ನನಗೆ ಹೊಸ ಕಾರು ಬಂತು. ಹೊಸ ಸಂಸದರಿಗೆ ಹಳೆ ಕಾರನ್ನು ಮೊದಲು ನೀಡುವುದು ವಾಡಿಕೆ. ಬಳಿಕ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡಲಾಗುತ್ತದೆ. ಆದರೆ ಕುಮಾರಸ್ವಾಮಿ ನೋಡಿದರೆ ಸುಮಲತಾ ಅಂಬರೀಶ್ ಬಳಸಿದ ಕಾರನ್ನು ಬೇಡ ಅಂದಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಸುಮಲತಾ ಅಂಬರೀಶ್ ಬಳಸಿದ ಕಾರನ್ನು ಅವರ ಮೇಲಿನ ಮುನಿಸಿನಿಂದ ಬೇಡಾ ಎಂದು ಹೇಳಿದ್ರಾ? ಅಥವಾ ರಾಜ್ಯ ಸರ್ಕಾರ ಪ್ರೋಟೋಕಾಲ್ ಪಾಲನೆ ಮಾಡದೇ ಇರುವುದನ್ನು ಮುಚ್ಚಿಕೊಳ್ಳಲು ಚಲುವರಾಯಸ್ವಾಮಿ ಹೀಗೆ ಮಾತಾಡಿದ್ದರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.