ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲಿಂದ ಕೆಳಗೆ ಬಿದ್ದ ಕಾರು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂರು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿರೋ ಘಟನೆ ನಡೆದಿದೆ.
ಈ ಘಟನೆ ಇಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ನಡೆದಿದೆ. ಚಾಲಕ ವರುಣ್ ಜೈನ್(31) ಮತ್ತು ಚೈತ್ರಾ(25), ರಚಿತಾ(23) ಎಂಬ ಇಬ್ಬರು ಯುವತಿಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಯಲಹಂಕ ರೈತರ ಸಂತೆ ಬಳಿಯ ಮೇಲ್ಸೇತುವೆ ಮೇಲೆ ಬರುತ್ತಿದ್ದಂತೆಯೇ ಕಾರು ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದೆ. ಸುಮಾರು ನೂರು ಮೀಟರ್ ರಸ್ತೆಯಲ್ಲೆ ಉಜ್ಜಿ ಮೇಲ್ಸೇತುವೆ ಮೇಲಿಂದ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ರಾಜಸ್ಥಾನ ರಿಜಿಸ್ಟ್ರೇಷನ್ ನ ಕಾರು ಇದಾಗಿದೆ.
ಸದ್ಯ ಗಾಯಾಳುಗಳನ್ನ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಲಹಂಕ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಭೀಕರ ಕಾರು ಅಪಘಾತದಿಂದ ಕಾರಿನ ಎಂಜಿನ್ ಬಿಡಿ ಭಾಗಗಳು ಚಲ್ಲಾಪಿಲ್ಲಿಯಾಗಿವೆ. ಇನ್ನು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರನ್ನ ಪೊಲೀಸರು ತೆರವುಗೊಳಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.