ಕಲಬುರಗಿ: ಟ್ರಾಕ್ಟರ್ ನ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಬಳಿ ನಡೆದಿದೆ.
ನಗರದ ನಿವಾಸಿ ಶ್ರೀರಂಗ್ ಶೇಡಕರ್ (42) ಮಲ್ಲಾಬಾದ್ ಗ್ರಾಮದ ನಿವಾಸಿ ರಮೇಶ್ ದೊಡ್ಮನಿ (40) ಮೃತಪಟ್ಟ ವಕೀಲರು. ಅಪಘಾತ ನಡೆದ ವೇಳೆ ಕಾರಿನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಅಪಘಾತ ಸಂಭವಿಸಲು ಕಾರ್ ಟಯರ್ ಸ್ಫೋಟ ಆಗಿದ್ದೇ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ವಕೀಲರಾದ ಶ್ರೀರಂಗ್ ಮತ್ತು ರಮೇಶ್ ಇಬ್ಬರು ಅಫಜಲಪುರ್ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ಪ್ರಕರಣವೊಂದರ ಸಂಬಂಧ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲಾಬಾದ್ ಗ್ರಾಮದ ಬಳಿ ಟಯರ್ ಸ್ಫೋಟಗೊಂಡಿದೆ. ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಟ್ರಾಕ್ಟರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಕಾರು ಚಾಲಕ ಮೃತ ಪಟ್ಟಿದ್ದಾರೆ. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.