ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೆದ್ದಾರಿಯಲ್ಲೆ ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರು ಹೊರವಲಯ ರಾಷ್ಟ್ರೀಯ ಹೆದ್ದಾರಿ 72 ರ ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಕುಟುಂಬ, ಸಕಲೇಶಪುರ ಕಡೆಯಿಂದ ಪ್ರವಾಸ ಮುಗಿಸಿ ಬೆಂಗಳೂರು ಕಡೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ಕಾರು ಶಿವಮೊಗ್ಗ ಮೂಲದ ಶ್ರೀಧರ್ ಎಂಬವರಿಗೆ ಸೇರಿದ್ದಾಗಿದೆ.
ಕಾರಿನಲ್ಲಿದ್ದ ಚಂದನ್ ಪಟೇಲ್, ಮೋನಿಕಾ, ಇಬ್ಬರು ಮಕ್ಕಳಾದ ಮನೋಜ್ಞ ಹಾಗೂ ಚಿಂತನ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಕಾರಿನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.