ದಾವಣಗೆರೆ: ಪೆಟ್ರೋಲ್ ಬಂಕ್ ಸಮೀಪವೇ ಮ್ಯಾಟಿಜ್ ಕಾರೊಂದು ಹೊತ್ತಿ ಉರಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.
ಇಂದು ಮಧ್ಯಾಹ್ನ ಬೆಂಗಳೂರು ಮೂಲದ ಮಹಮ್ಮದ್ ಸರ್ಮದ್ ಎಂಬವರಿಗೆ ಸೇರಿದ್ದ ಮ್ಯಾಟಿಜ್ ಕಾರು ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಭಾರತ್ ಪೆಟ್ರೋಲ್ ಬಂಕ್ ಬಳಿ ಹೊತ್ತಿ ಉರಿದಿದೆ.
ಸರ್ಮದ್ ಕಾರಿನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಎಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಬಳಿಕ ರೋಗಿಯನ್ನು ಬೇರೊಂದು ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಂಕಿ ಹೊತ್ತಿದ ಪರಿಣಾಮ ಮ್ಯಾಟಿಜ್ ಕಾರು ಹೊತ್ತಿ ಉರಿಯತೊಡಗಿದೆ. ಸರ್ಮದ್ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ ಹೊತ್ತಿ ಉರಿದ ಸಮೀಪವೇ ಪೆಟ್ರೋಲ್ ಬಂಕ್ ಇದ್ದ ಕಾರಣ ಕ್ಷಣಕಾಲ ಭಯದ ವಾತಾವರಣ ಉಂಟಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv