ಚಿಕ್ಕಬಳ್ಳಾಪುರ: ಆಂಧ್ರಪ್ರದೇಶ ಮೂಲದ ಯುವಕ-ಯುವತಿ ಸಂಚರಿಸುತ್ತಿದ್ದ ಬೈಕ್ ಗೆ ಆಂಧ್ರಪ್ರದೇಶ ಪೊಲೀಸರಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತಳಗವಾರಹೊಸಹಳ್ಳಿ ಬಳಿ ನಡೆದಿದೆ.
ಘಟನೆಯಲ್ಲಿ ಬೈಕ್ನಲ್ಲಿದ್ದ ಕದಿರಿ ಮೂಲದ ನಾಗಾರ್ಜುನ ಹಾಗೂ ಮಲ್ಲಿಕಾ ಗಾಯಗೊಂಡು ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಪಿ04ಬಿಸಿ 3222 ನಂಬರಿನ ಸ್ವಿಫ್ಟ್ ಕಾರು ಆಂಧ್ರದ ಕಡಪ ಎಸ್ಪಿ ಕಚೇರಿಗೆ ಸೇರಿದ್ದು ಎನ್ನಲಾಗಿದೆ.
ಘಟನೆಯಲ್ಲಿ ಯುವಕ ನಾಗರಾಜು ಬಲಗಾಲಿನ ಪಾದ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವಕ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಿಫ್ಟ್ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಅಫಘಾತ ಸಂಭವಿಸಿದೆ. ಆದ್ರೆ ಅಪಘಾತದ ನಂತರ ಗಾಯಾಳುಗಳ ನೆರವಿಗೆ ಬರಬೇಕಾದ ಪೊಲೀಸರೇ ಅಪಘಾತ ಮಾಡಿ ಸ್ಥಳದಲ್ಲೇ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಸ್ಥಳೀಯರೇ ಗಾಯಾಳುಗಳ ನೆರವಿಗೆ ಧಾವಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳೀಯ ಕೈವಾರ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.