– ಓರ್ವ ಸ್ಥಳದಲ್ಲೇ ಸಾವು, ನಾಲ್ಕು ಮಂದಿಗೆ ಗಾಯ
ಶಿವಮೊಗ್ಗ: ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿದ ಟಾಟಾ ಸುಮೋ ಹಾಗೂ ಓಮ್ನಿ ಕಾರು ನಡುವೆ ಅಪಘಾತ ಸಂಭವಿಸಿ, ಓಮ್ನಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಬಳಿ ನಡೆದಿದೆ.
ಮೃತಪಟ್ಟ ಓಮ್ನಿ ಕಾರು ಚಾಲಕನನ್ನು ಭದ್ರಾವತಿ ನಗರದ ಮೀನುಗಾರ ಕಾಲೋನಿಯ ಮಂಜುನಾಥ್ (35) ಎಂದು ಗುರುತಿಸಲಾಗಿದೆ. ಟಾಟಾ ಸುಮೋದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ನಾಗಲಕ್ಷ್ಮಿ, ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಟಾಟಾ ಸುಮೋ ಚಾಲಕ ಸುಬ್ರಹ್ಮಣ್ಯ ಹಾಗೂ ಓಮ್ನಿ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿಕೊಂಡು ಮುಂಜಾನೆ 6 ಗಂಟೆ ಸಮಯಕ್ಕೆ ಶಿವಮೊಗ್ಗ ಕಡೆ ವಾಪಸ್ ಬರುತ್ತಿದ್ದರು. ಓಮ್ನಿ ಕಾರು ಭದ್ರಾವತಿಯಿಂದ ತರೀಕೆರೆ ಕಡೆ ತೆರಳುತಿತ್ತು. ಈ ವೇಳೆ ಎರಡು ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅವಘಡ ಉಂಟಾಗಿದೆ. ಘಟನೆ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ