ಬಾಗಲಕೋಟೆ: ಕಾರ್ ಪಲ್ಟಿಯಾಗಿ ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ(65) ಲಿಂಗೈಕ್ಯರಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸ್ವಾಮಿಜಿ ಹುಬ್ಬಳ್ಳಿಯಿಂದ ಗವಿಮಠಕ್ಕೆ ತೆರಳುವಾಗ ಮುಧೋಳ ಹಾಗೂ ಲೋಕಾಪುರ ಮಧ್ಯೆ ಚಾಲಕ ಅನ್ವೇಶ್ ನಿದ್ದೆಗೆ ಜಾರಿದ್ದ ಕಾರಣ ಕಾರು ಎರಡು ಬಾರಿ ಪಲ್ಟಿಯಾಗಿ ಬಿದ್ದು ಈ ಅವಘಡ ಸಂಭವಿಸಿದೆ.
ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಪಘಾತದಲ್ಲಿ ಸ್ವಾಮೀಜಿ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ನಿಧನರಾಗಿದ್ದಾರೆ.
ಚಾಲಕ ಅನ್ವೇಶ್ ಗೆ ಕೂಡ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಭಕ್ತರಿಗೆ ಸಾಂತ್ವಾನ ಹೇಳಿದ್ರು. ಸದ್ಯ ಸ್ವಾಮೀಜಿಯ ಪಾರ್ಥಿವ ಶರೀರವನ್ನ ಮುಧೋಳ ನಗರಕ್ಕೆ ರವಾನೆ ಮಾಡಲಾಗ್ತಿದೆ ಅಂತಾ ಭಕ್ತರಾದ ಬಸವರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.