ಮಂಡ್ಯ: ಟೊಮೆಟೋ ತುಂಬಿಕೊಂಡು ಸಾಗಿಸುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿ ಬಿದ್ದು ಸುಮಾರು 5 ಸಾವಿರ ಕೆ.ಜಿ ಟೊಮೆಟೋ ರಸ್ತೆ ಪಾಲಾದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಕ್ಯಾಂಟರ್ನಲ್ಲಿ ಟೊಮೆಟೋ ಸಾಗಿಸಲಾಗುತ್ತಿತ್ತು. ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿ ಬಿದ್ದಿದೆ. ಇದರಿಂದ ಸುಮಾರು ಐದು ಸಾವಿರ ಕೆ.ಜಿ ಯಷ್ಟು ಟೊಮೆಟೋ ರಸ್ತೆಯಲ್ಲಿ ಚೆಲ್ಲಿದೆ. ಅಷ್ಟೇ ಅಲ್ಲದೇ ಹೆದ್ದಾರಿಗೆ ಕ್ಯಾಂಟರ್ ಅಡ್ಡಲಾಗಿ ಬಿದ್ದಿರುವ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.
ತಡರಾತ್ರಿ ಕ್ಯಾಂಟರ್ ಹೆದ್ದಾರಿಯಲ್ಲಿ ಬಿದ್ದಿದ್ದರೂ ಅದನ್ನು ತೆರವುಗೊಳಿಸಲು ಟೋಲ್ ಸಿಬ್ಬಂದಿ ಯಾವುದೇ ಸಹಾಯ ಮಾಡಲು ಮುಂದಾಗಿಲ್ಲ. ಅಪಘಡದ ವಿಷಯ ತಿಳಿದು ಸ್ಥಳಕ್ಕೆ ಬಂದ ಟೋಲ್ ಸಿಬ್ಬಂದಿ ನಮ್ಮಲ್ಲಿ ಕ್ರೇನ್ ವ್ಯವಸ್ಥೆಯಿಲ್ಲ. ಹೀಗಾಗಿ ನೀವೇ ಕ್ರೇನ್ ತರಿಸಿ ನಿಮ್ಮ ವಾಹನವನ್ನು ಹೆದ್ದಾರಿಯಿಂದ ತೆರವುಗೊಳಿಸಿ ಎಂದು ಕ್ಯಾಂಟರ್ ಮಾಲೀಕರಿಗೆ ತಿಳಿಸಿದ್ದಾರೆ.
ಒಂದು ಕಡೆ ಟೊಮೆಟೋ ನಾಶವಾದ ಸಂಕಷ್ಟ ಮತ್ತೊಂದೆಡೆ ಟೋಲ್ ಕಟ್ಟಿಸಿಕೊಂಡರೂ ಕೂಡ ಅವಘಡ ಸಂಭವಿಸಿದಾಗ ಕನಿಷ್ಟ ಸೌಲಭ್ಯ ಒದಗಿಸದ ಟೋಲ್ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.