ಲಕ್ನೋ: ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಸುಪ್ರೀಂ ಕೋರ್ಟ್ ಆದೇಶವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಳ್ಳಿಹಾಕಿದ್ದಾರೆ.
ನಗರದ 5 ಎಕರೆ ವ್ಯಾಪ್ತಿಯಲ್ಲಿ, 10 ಬೆಡ್ ರೂಮ್ ಗಳನ್ನು ಒಳಗೊಂಡ ಬಂಗಲೆಯಾಗಿದ್ದು, ರಾಜಸ್ಥಾನದ ಮರಳುಗಲ್ಲು ಮತ್ತು ಗುಲಾಬಿ ಅಮೃತಶಿಲೆಯನ್ನು ಬಳಸಿ ಕಟ್ಟಲಾಗಿದೆ. ಇದು ಸ್ಮಾರಕವಾಗಿದ್ದು ಈ ವಿಚಾರದಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.
ಬಂಗಲೆಯ ಹೊರಗೆ ಶ್ರೀ ಕಾನ್ಶಿ ರಾಮ್ಜಿ ಯಾದ್ಗಾರ್ ವಿಶ್ರಾಂ ಸ್ಥಳ ಎಂಬ ಹೊಸ ಬೋರ್ಡ್ ಅನ್ನು ಹಾಕಲಾಗಿದೆ. ಬಿ ಎಸ್ ಪಿ ಸಂಸ್ಥಾಪಕರು ಮಾಯಾವತಿಯ ಗುರುಗಳು ಕಾನ್ಶಿ ರಾಮ್. ಹೊಸ ಬೋರ್ಡ್ ಹಾಕಿದ ಮರುದಿನವೇ ಮಾಯಾವತಿ ಸಹಾಯಕ ಸತೀಶ್ ಚಂದ್ರ ಮಿಶ್ರ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಬಂಗಲೆಗೆ ಸಂಬಂಧಪಟ್ಟ ದಾಖಲೆಯನ್ನು ತೋರಿಸಿದ್ದಾರೆ.
2011 ಜನವರಿ 13, ರಂದು ಬಂಗಲೆಯನ್ನು ಕಾನ್ಶಿ ರಾಮ್ ಸ್ಮಾರಕ ಎಂದು ಘೋಷಿಸಲಾಗಿದೆ. ಜೀವನ ಪರ್ಯಂತ ಮಾಯಾವತಿಯವರು ಈ ಬಂಗಲೆಯಲ್ಲಿ ಇರಬಹುದು. ಬಂಗಲೆಯ ಎರಡು ರೂಮ್ ಗಳನ್ನು ಉಪಯೋಗಿಸತ್ತಾರೆ ಹಾಗೂ ಬಂಗಲೆಯ ಉಸ್ತುವಾರಿಯಾಗಿರುತ್ತಾರೆ ಎಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಯೋಗಿಯವರಿಗೆ ತೋರಿಸಿದ್ದಾರೆ.
ಮಾಯಾವತಿಯವರು ಬಂಗಲೆಯಲ್ಲಿ ಎರಡು ಸಣ್ಣ ರೂಮ್ ಗಳನ್ನು ಮಾತ್ರ ಬಳಸುತ್ತಿದ್ದಾರೆ. ಉಳಿದ ರೂಮ್ ಗಳಲ್ಲಿ ಕಾನ್ಶಿ ರಾಮ್ ಲೈಬ್ರರಿ ಮತ್ತು ಭಿತ್ತಿ ಚಿತ್ರಗಳು ಇವೆ. ಹಾಗಾಗಿ ಬಂಗಲೆಯನ್ನು ಸಂಪೂರ್ಣ ಸ್ಮಾರಕವನ್ನಾಗಿ ಮಾಡವಂತೆ ಸರ್ಕಾರ ಪುನಃ ಆದೇಶವನ್ನು ಹೊರಡಿಸಿದೆ ಎಂದು ಭೇಟಿಯ ಬಳಿಕ ಮಿಶ್ರ ಅವರು ತಿಳಿಸಿದ್ದಾರೆ.
ಬಂಗಲೆಯನ್ನು ಖಾಲಿ ಮಾಡಿದರು ಎಂದೆಂದಿಗೂ ಈ ಬಂಗಲೆ ಸ್ಮಾರಕವಾಗಿಯೇ ಇರಬೇಕು ಎಂದು ಮಾಯಾವತಿಯವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದು ಬಿ ಎಸ್ ಪಿ ತಿಳಿಸಿದೆ.
4 ಮಾಜಿ ಮುಖ್ಯಮಂತ್ರಿಗಳಿಗೆ ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಬಂಗಲೆಯನ್ನು 15 ದಿನದೊಳಗಾಗಿ ಖಾಲಿ ಮಾಡುವಂತೆ ನೋಟೀಸ್ ಕೊಟ್ಟಿತ್ತು. ಕುಟುಂಬ ಮತ್ತು ಭದ್ರತೆಯ ಕಾರಣದಿಂದ ಸದ್ಯಕ್ಕೆ ಖಾಲಿ ಮಾಡಲು ಆಗುವುದಿಲ್ಲ 2 ವರ್ಷ ಕಾಲಾವಕಾಶವನ್ನು ಅಖಿಲೇಶ್ ಯಾದವ್ ಕೇಳಿದ್ದಾರೆ ಎನ್ನಲಾಗಿದೆ.