ಉಡುಪಿ: ಹಿಂದೂಪರ ಸಂಘಟನೆಗಳ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ರಾಜ್ಯ ಸರ್ಕಾರ ಆರಂಭವೇ ಆಘಾತ ನೀಡಿದ್ದು, ಅಭಿಯಾನ ಮತ್ತು ಸಹಿ ಸಂಗ್ರಹ ಮಾಡಿದ್ದ ಹಿಂದೂಪರ ಮುಖಂಡರ ವಿರುದ್ಧ ಪ್ರಕರಣ ದಾಖಲು ಮಾಡಿದೆ.
ಲವ್ ಜಿಹಾದ್ ವಿರುದ್ಧ ಅಭಿಯಾನ ಮಾಡಿದ್ದ ಹಿಂದೂ ಪರ ಸಂಘಟನೆಯ ಮೇಲೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ವಿಶ್ವಹಿಂದೂ ಪರಿಷದ್, ಭಜರಂಗದಳ ಮತ್ತು ದುರ್ಗಾವಾಹಿನಿ ಸದಸ್ಯರು ಉಡುಪಿಯಲ್ಲಿ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಪೊಲೀಸರ ಅನುಮತಿ ಪಡೆದುಕೊಂಡಿರಲಿಲ್ಲ. ಇದರಿಂದ ಐಪಿಎಸ್ ಸೆಕ್ಷನ್ 143, 149, 290 ನಿಯಮದಡಿ ಉಡುಪಿ ನಗರ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಧಮನ ನೀತಿಯನ್ನು ಅನುಸರಿಸಿದೆ. ಸರ್ಕಾರ ಪೊಲೀಸರ ಕೈಯಲ್ಲಿ ಕೇಸು ಹಾಕಿಸಿದೆ. ಇದು ಪೊಲಿಟಿಕಲ್ ಪೊಲೀಸ್ ಗಿರಿ. ಇನ್ನು ಎರಡು ದಿನಗಳ ಒಳಗೆ ಪ್ರಕರಣವನ್ನು ವಾಪಾಸ್ ಪಡೆಯದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಉಡುಪಿ ಎಂಜಿಎಂ ಕಾಲೇಜು ಬಳಿ ಲವ್ ಜಿಹಾದ್ ವಿರುದ್ಧ ಜನವರಿ 22 ರಂದು ವಿಶ್ವಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಸಂಘಟನೆ ಮುಖಂಡರು ಕಾಲೇಜು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಬಳಿ ಸಹಿ ಸಂಗ್ರಹಿಸಿ ಲವ್ ಜಿಹಾದ್ ವಿರುದ್ಧ ಪಾಠ ಮಾಡಿದ್ದರು. ಕರ ಪೊಲೀಸರಿಗೆ ಮಾಹಿತಿ ನೀಡದೆ ಗುಂಪು ಸೇರಿದ್ದು, ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಮಾಡಿದ್ದರಿಂದ ಕೇಸು ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಭಿಯಾನ ಮುಂದುವರೆಸಲಿದ್ದು, ದೇವಸ್ಥಾನ, ಶಾಲಾ ಕಾಲೇಜು, ಹಾಸ್ಟೆಲ್ ಮತ್ತಿತರ ಕಡೆ ತೆರಳಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ವಿಶ್ವಹಿಂದೂ ಪರಿಷದ್ ಹೇಳಿದೆ. ಇದನ್ನು ಓದಿ: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳ ಮುಂದೆ ಅಭಿಯಾನ