ಮಂಗಳೂರು: ರಾಜ್ಯದ ಕರಾವಳಿಯ ಪುತ್ತೂರಿನ ಯುವಕರ ತಂಡವೊಂದು ತಯಾರಿಸಿದ ಕಿರುಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದಿದ್ದು, 2 ದಿನದಲ್ಲಿ 4 ಸಾವಿರ ಜನ ಕಿರುಚಿತ್ರವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿದ್ದಾರೆ.
ಗ್ರಾಮೀಣ ಭಾಗದ ಯುವಕರ ಈ ಪ್ರಯತ್ನಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪುತ್ತೂರಿನ ಹುಡುಗರು ಹೊಸ ವರ್ಷಕ್ಕಾಗಿ ಹೊಸ ತರಹದ ಕಲ್ಪನೆಯೊಂದಿಗೆ ಸಮಾಜದಲ್ಲಿ ಮದ್ಯವ್ಯಸನಿಗಳಿಂದ ಹಾಗೂ ಮಾದಕ ವಸ್ತುಗಳಿಂದ ದೂರ ಇರಬೇಕೆಂಬ ಅರ್ಥಪೂರ್ಣ ಸಂದೇಶವನ್ನು ನೀಡಿದ್ದು, ಸಸ್ಷೆನ್ಸ್ ಮತ್ತು ಥ್ರಿಲ್ಲರ್ ಇರುವ ಕಿರುಚಿತ್ರ ತಯಾರಿಸಿ ಜನರ ಮುಂದಿಟ್ಟಿದ್ದಾರೆ.
ಹೊಸ ಪ್ರಯತ್ನ ಆದರೂ ಉತ್ತಮ ಸಂದೇಶ ಇರುವ ಕಿರುಚಿತ್ರವನ್ನು ಜನರು ಬಹಳ ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರಿನವರೇ ಆದ ಪ್ರವೀಣ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಕಿರುಚಿತ್ರದಲ್ಲಿ ವಿಜೇತ್ ಮುಂಡಾಳ, ಸಂತೋಷ್ ಸುವರ್ಣ ಮೇರ್ಲ, ರಾಜೇಶ್ ಪ್ರಸಾದ್ (ಆರ್.ಪಿ)ಕೌಡಿಚ್ಚಾರ್, ನವೀನ್ ಎಕ್ಕಾರು, ದರ್ಶಿತಾ, ಶೃತಿ ದಾಸ್, ಶ್ರಾವ್ಯ, ಮಹೇಶ್ ಓಟೆ, ಗಂಗಾಧರ ಓಟೆ ಮತ್ತು ಸ್ನೇಹಾ ಕರ್ಕೇರಾ ನಟಿಸಿದ್ದು, ಮೊಟ್ಟ ಮೊದಲ ಪ್ರಯತ್ನದಲ್ಲೇ ಕಿರುಚಿತ್ರದಲ್ಲಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಭಿನ್ನ ಪ್ರಯತ್ನಕ್ಕೆ ಕೈ ತಂಡಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಜನರು ಹಾರೈಸಿದ್ದಾರೆ.