ನವದೆಹಲಿ: ಸಿಎಂ ಸಿದ್ದರಾಮಯ್ಯ (CM Siddaramaiah) ದೆಹಲಿಗೆ ಬರುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಯಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯನವರು ದೆಹಲಿಗೆ ಬರಲಿದ್ದಾರೆ. ಮಧ್ಯಾಹ್ನ ಬೆಂಗಳೂರಿನಿಂದ ಸಿಎಂ ದೆಹಲಿಗೆ ಬರುತ್ತಿದ್ದಂತೆ ಡಿಕೆಶಿ ಸಂಜೆ 4:30ರ ವಿಮಾನದ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ. ಡಿ.ಕೆ ಸುರೇಶ್ ಅವರನ್ನು ದೆಹಲಿಯಲ್ಲೇ ಬಿಟ್ಟು ಡಿಕೆಶಿ ಬೆಂಗಳೂರಿಗೆ ಮರಳುತ್ತಿದ್ದು ನಾಳೆ ಮತ್ತೆ ದೆಹಲಿಗೆ ಪ್ರಯಾಣಿಸಲಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ (High Command) ಮಟ್ಟದಲ್ಲಿ ಬೇರೆ ಬೇರೆ ನಾಯಕರ ಭೇಟಿಯನ್ನು ಡಿಕೆಶಿ ಬಯಸಿದ್ದರು. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ್ದು ಇಲ್ಲಿಯವರೆಗೆ ಸಮಯ ಸಿಕ್ಕಿಲ್ಲ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಕೆ ಸಹೋದರರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ಬ್ಲ್ಯಾಕ್ಮೇಲ್ ಮಾಡುವ ವ್ಯಕ್ತಿ ನಾನಲ್ಲ, ರಾಜೀನಾಮೆ ನೀಡಲ್ಲ: ಡಿಕೆಶಿ
ದೆಹಲಿಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಭೇಟಿಯ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿಕೆಶಿ, ಡಿಸೆಂಬರ್ ಒಳಗೆ ನೂರು ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪೂಜೆ ಮಾಡಬೇಕಿದ್ದು ದಿನಾಂಕ ನಿಗದಿಯಾಗಬೇಕಿದೆ. ಡಿಸೆಂಬರ್ 1 ಸಂಸತ್ ಅಧಿವೇಶನ ಶುರುವಾಗಲಿರುವುದರಿಂದ ಒಂದು ಶನಿವಾರ ಅಥವಾ ಭಾನುವಾರ ಬನ್ನಿ ಎಂದು ಕರೆಯಲು ಹೋಗುತ್ತಿದ್ದೇನೆ. ರಾಹುಲ್ ಗಾಂಧಿ (Rahul Gandhi) ಮತ್ತು ಖರ್ಗೆ ಸಾಹೇಬ್ರು ಬಂದು ಈ ಕಾರ್ಯ ಮಾಡಬೇಕು ಎನ್ನುವ ಆಸೆ ನನಗಿದೆ. 70 ರಿಂದ 80 ಕಡೆ ಜಾಗ ಸಿದ್ದವಾಗಿದೆ ಎಂದು ಹೇಳಿದ್ದರು.

