ಬೆಂಗಳೂರು: ಯಡಿಯೂರಪ್ಪ ಎಷ್ಟು ಸರ್ಕಸ್ ಮಾಡುತ್ತಿದ್ದಾರೋ ಆ ಸರ್ಕಸ್ನಲ್ಲಿ ಕಾಂಗ್ರೆಸ್, ಜೆಡಿಎಸ್ನಿಂದ ಬಂದವರು ಅಷ್ಟೇ ಪಾಲುದಾರರು. ಗೆದ್ದ 24 ಗಂಟೆಯಲ್ಲಿ ಮಿನಿಸ್ಟರ್ ಮಾಡ್ತೀನಿ ಎಂದಿದ್ದ ಯಡಿಯೂರಪ್ಪ ಧನುರ್ ಮಾಸದ ನೆಪವನ್ನ ಹೇಳಿ ಸುಮ್ಮನಿರಿಸಿದ್ರು. ಆದರೆ ಧನುರ್ ಮಾಸ ಮುಗಿಯುತ್ತಿದ್ರೂ ಸಂಪುಟ ವಿಸ್ತರಣೆ ಸುಳಿವು ಸಿಕ್ತಿಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ಗಾಗಿ ಯಡಿಯೂರಪ್ಪ ಮತ್ತು ಗೆದ್ದ ಶಾಸಕರು ಕಾದು ಕುಳಿತಿದ್ದಾರೆ. ಈ ನಡುವೆ ಮಾತಾಡಂಗಿಲ್ಲ ಬಿಡಂಗಿಲ್ಲ ಅನ್ನೋ ಹಾಗೆ ಯಡಿಯೂರಪ್ಪ ಅವರನ್ನ ಸಮರ್ಥಿಸಿಕೊಳ್ತಿದ್ದಾರೆ ವಲಸೆ ಬಂದ ಹಕ್ಕಿಗಳು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದ ಎಚ್.ವಿಶ್ವನಾಥ್ಗೆ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಕೇಳಿದಾಗ ಅವರು ಹೇಳಿದ್ದು ನಾಲಿಗೆ ಮೇಲೆ ನಿಂತ ನಾಯಕನ ಡೈಲಾಗ್. ನಮಗೆ ಯಡಿಯೂರಪ್ಪ ಮಾತ್ರ ಗೊತ್ತು, ಬಿಜೆಪಿ ಹೈಕಮಾಂಡ್ ನಲ್ಲಿ ಯಾರೂ ಗೊತ್ತಿಲ್ಲ. ಕರ್ನಾಟಕದಲ್ಲಿ ನಾಲಿಗೆ ಮೇಲೆ ನಿಂತ ಜನನಾಯಕ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ ಮಾತ್ರ. ಹಾಗಾಗಿ ಅವರನ್ನ ನಂಬಿದ್ದೇವೆ ಅಂತೇಳಿದ್ರು. ಅಷ್ಟೇ ಅಲ್ಲ ನಮ್ಮನ್ನ ಸಚಿವರನ್ನಾಗಿ ಮಾಡಲೇಬೇಕು ಅಂತಾ ನಾವು ಡಿಮ್ಯಾಂಡ್ ಮಾಡಿಲ್ಲ. ಕರ್ನಾಟಕದಲ್ಲಿ ಜನತಂತ್ರ ಒದ್ದಾಡ್ತಿತ್ತು, ಅದನ್ನ ಉಳಿಸಲು ಯಡಿಯೂರಪ್ಪರನ್ನು ಸಿಎಂ ಮಾಡಿದ್ದೇವೆ. ಎಲ್ಲವೂ ಅವರಿಗೆ ಬಿಟ್ಟಿದ್ದು ಅಂತಾ ಜಾಣ್ಮೆಯ ಉತ್ತರ ಕೊಟ್ಟು ವಿಶ್ವನಾಥ್ ಜಾರಿಕೊಂಡರು.
ಒಟ್ಟಾರೆಯಾಗಿ ಕಾಂಗ್ರೆಸ್, ಜೆಡಿಎಸ್ನಲ್ಲಿದ್ದಾಗ ಅಬ್ಬರಿಸುತ್ತಿದ್ದ ವಲಸೆ ಹಕ್ಕಿಗಳು ಈಗ ಸೈಲೆಂಟ್ ಆಗಿವೆ. ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಮಾರ್ಮಿಕವಾಗಿ ಮಾತಾಡ್ತಾರೆ ಹೊರತೇ ಬಹಿರಂಗವಾಗಿ ಮಾತನಾಡದೇ ಜಾಣ್ಮೆ ತೋರುತ್ತಿದ್ದಾರೆ. ಈ ಜಾಣ್ಮೆಯ ನಡೆಗೆ ಯಡಿಯೂರಪ್ಪ ಭರವಸೆ ಕಾರಣ ಎನ್ನಲಾಗಿದ್ದು, ಸಂಕ್ರಾಂತಿ ಬಳಿಕವೂ ಸಂಪುಟ ವಿಸ್ತರಣೆಯಾಗದಿದ್ದರೆ ಗೆಲುವಿನ ನಗೆ ಬೀರಿರುವ ವಲಸೆ ಹಕ್ಕಿಗಳು ಸದ್ದು ಮಾಡುತ್ವಾ.? ಇಲ್ವೋ..? ಅನ್ನೋದನ್ನ ಕಾದುನೋಡಬೇಕಿದೆ.