ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಅದರಲ್ಲೂ ದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯೂ ಹಿಂಸಾತ್ಮಕ ರೂಪ ಪಡೆದು ಅನೇಕ ಮಂದಿಯನ್ನು ಬಲಿಪಡೆದಿದೆ.
ರಾಷ್ಟ್ರ ರಾಜಧಾನಿ ಮಾತ್ರವಲ್ಲ, ರಾಜ್ಯ ರಾಜಧಾನಿಯಲ್ಲೂ ಒಂದಿಲ್ಲೊಂದು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲೂ ಶಾಹಿನ್ ಬಾಗ್ ರೀತಿಯಲ್ಲಿ ಅಹೋರಾತ್ರಿ ಧರಣಿ, ಪ್ರತಿಭಟನೆ ಕಳೆದ 20 ದಿನಗಳಿಂದ ನಡೆಯುತ್ತಿದೆ.
ಹೌದು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರೋ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಪ್ರತಿದಿನ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಮತ್ತೊಂದು ಶಾಹಿನ್ ಬಾಗ್ ಎಂದು ಹೆಸರು ಕೊಟ್ಟಿದ್ದು, ಬಿಲಾಲ್ ಬಾಗ್ ಬೆಂಗಳೂರು ಎಂಬ ಹೆಸರಿನಡಿಯಲ್ಲಿ ಸೇವ್ ಇಂಡಿಯಾ, ಸಂವಿಧಾನವನ್ನ ರಕ್ಷಸಿ ಎಂದು ಬ್ಯಾನರ್ ಹಾಕಿಕೊಂಡು ನೂರಾರು ಮಹಿಳೆಯರು ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇವರ ಅಹೋರಾತ್ರಿ ಧರಣಿಗೆ ಬಾಲಿವುಡ್ ನಟ ನಸೀರುದ್ದೀನ್ ಶಾ, ಶಾಸಕಿ ಸೌಮ್ಯ ರೆಡ್ಡಿ ಸಹ ಸಾಥ್ ನೀಡಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನ ಹಿಂಪಡೆಯುವವರೆಗೆ ಧರಣಿ ಮಾಡಲು ಇಲ್ಲಿನ ಮಹಿಳೆಯರು ಹಾಗೂ ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.