ದಾವಣಗೆರೆ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಎಂಎಲ್ಸಿ ಸಿ.ಟಿ.ರವಿ ಅವರನ್ನು ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ (C.T.Ravi) ಅದ್ದೂರಿ ಸ್ವಾಗತ ಕೋರಿದರು.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ವಶದಲ್ಲಿರಿಸಲಾಗಿತ್ತು. ನಂತರ ಶುಕ್ರವಾರ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲು ಪೊಲೀಸರು ಕಾರಿನಲ್ಲಿ ಕರೆತರುತ್ತಿದ್ದರು. ಇದನ್ನೂ ಓದಿ: ಸತ್ಯಮೇವ ಜಯತೆ: ಕೋರ್ಟ್ ಆದೇಶದ ಬೆನ್ನಲ್ಲೇ ಸಿ.ಟಿ.ರವಿ ಫಸ್ಟ್ ರಿಯಾಕ್ಷನ್
ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ಹೈಕೋರ್ಟ್ ತುರ್ತು ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ತಕ್ಷಣವೇ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತು.
ಕೋರ್ಟ್ ಆದೇಶದ ಹೊತ್ತಿಗೆ ಸಿ.ಟಿ.ರವಿ ಅವರನ್ನು ಪೊಲೀಸರು ದಾವಣಗೆರೆ ಹತ್ತಿರ ಕಾರಿನಲ್ಲಿ ಕರೆತರುತ್ತಿದ್ದರು. ಕೋರ್ಟ್ ಆದೇಶ ಗಮನಿಸಿ ದಾವಣಗೆರೆಯಲ್ಲಿ ರಿಲೀಸ್ ಮಾಡಿದರು. ಪಕ್ಷದ ನಾಯಕನನ್ನು ಬೆಳಗಾವಿಯಿಂದಲೂ ಬಿಜೆಪಿ ಕಾರ್ಯಕರ್ತರು ಹಿಂಬಾಲಿಸಿಕೊಂಡು ಬಂದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಕೂಡ ಹಿಂಬಾಲಿಸಿದ್ದರು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್ ರಿಲೀಫ್ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ