ರಾಮನಗರ: ಹೆಣ್ಣು-ಗಂಡಿನ ನಡುವಿನ ಒಲವು ತಡೆಯೋಕ್ಕಾಗಲ್ಲ, ಅದು ಎಲ್ಲದಕ್ಕೂ ಮೀರಿದ್ದು. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದು ಮೈಸೂರು ಯುವ ದಸರದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರಫೋಸ್ ಮಾಡಿದ್ದ ವಿಚಾರವಾಗಿ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ದಸರಾ ಹಿನ್ನೆಲೆ ರಾಮನಗರದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸಿ.ಟಿ ರವಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ನಿವೇದಿತಾಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದರು. ಡಿವಿಜಿಯವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ಚಂದನ್ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ:ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ
ಮಣ್ಣಿನ ಆತುರಕ್ಕಿಂತ ಚಿನ್ನದ ಆತುರ ಲೇಸು, ಚಿನ್ನದ ಆತುರಕ್ಕಿಂತ ಗಂಡು ಹೆಣ್ಣಿನ ಒಲವು ದೊಡ್ಡದು ಎಂದು ಡಿವಿಜಿಯವರು ಹೇಳಿದ್ದಾರೆ. ಹಾಗೆಯೇ ಗಂಡು-ಹೆಣ್ಣಿನ ಒಲವು ತಡೆಯಲು ಸಾಧ್ಯವಿಲ್ಲ, ಅದು ಎಲ್ಲಕ್ಕೂ ಮೀರಿದ್ದು. ಚಂದನ್ ನಿವೇದಿತಾ ವಿಚಾರವನ್ನು ಎಳೆದುಕೊಂಡು ಹೋಗುತ್ತಾ, ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದರು. ಇದನ್ನೂ ಓದಿ:ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್
ಯುವ ದಸರಾ ವೇದಿಕೆ ಮೇಲೆ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿರುವ ವಿಷಯ ಸದ್ಯ ಭಾರೀ ಸುದ್ದಿಯಲ್ಲಿದೆ. ಅಭಿಮಾನಿಗಳು ಈ ಕ್ಯೂಟ್ ಜೋಡಿ ಪ್ರೀತಿ ವಿಚಾರ ತಿಳಿದು ಖುಷಿಪಟ್ಟಿದ್ದರೆ. ಕೆಲವರು ಸಾರ್ವಜನಿಕ ವೇದಿಕೆ ಮೇಲೆ ಚಂದನ್ ತನ್ನ ಪ್ರೀತಿ ನಿವೇದನೆ ಮಾಡಿದ್ದು ತಪ್ಪು ಎಂದು ವಿರೋಧಿಸಿದ್ದಾರೆ.