ಬೆಂಗಳೂರು: ಕಾರು ಅಪಘಾತಕ್ಕೊಳಗಾಗಿ ಶಾಸಕ ಸಿ.ಟಿ ರವಿ ಅವರು ಬೆಳಗ್ಗಿನ ಜಾವ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಮುಂಜಾನೆ ಸುಮಾರು 5 ಗಂಟೆ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಸಿಟಿ ರವಿ ಅವರ ಫಾರ್ಚೂನರ್ ಕಾರು ಕೂಡ ಪಲ್ಟಿಯಾಗಿತ್ತು. ಪರಿಣಾಮ ಸಿ.ಟಿ ರವಿ ಸೇರಿದಂತೆ ಮೂರು ಜನರಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಹೀಗಾಗಿ ಬೆಳಗ್ಗಿನ ಜಾವ ಸುಮಾರು 3.00 ಗಂಟೆಗೆ ಶಾಸಕ ಸಿ.ಟಿ ರವಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾದ್ದರಿಂದ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಬೆಳಗ್ಗೆ ಸುಮಾರು 5 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಸಿಟಿ ರವಿ ಅವರ ಫಾರ್ಚೂನರ್ ಕಾರು, ರಸ್ತೆ ಬದಿ ನಿಂತಿದ್ದ ಸುನಿಲ್ ಗೌಡ ಮತ್ತು ಶಶಿಕುಮಾರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇತ್ತ ಸಿಟಿ ರವಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಕುಣಿಗಲ್ ತಾಲೂಕಿನ ಆಸ್ಪತ್ರೆ ಎದುರು ಮೃತ ಸ್ನೇಹಿತರು ಮತ್ತು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಅಪಘಾತ ಮಾಡಿ ಓಡಿ ಹೋದ ಸಿ.ಟಿ.ರವಿ ಸ್ಥಳಕ್ಕೆ ಬರುವಂತೆ ಆಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv