ಹಣ ಇದ್ದವರು ಕೇಸ್ ಮುಚ್ಚಿಹಾಕ್ತಾರೆ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ- ಮೃತ ಶಶಿಕುಮಾರ್ ತಂದೆ ಕಣ್ಣೀರು

Public TV
2 Min Read
rmg shashi father 1

ರಾಮನಗರ: ಶಾಸಕ ಸಿಟಿ ರವಿ ಕಾರು ಅಪಘಾತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಶಶಿಕುಮಾರ್ ಅವರ ತಂದೆ ಜಯರಾಮ್ ಅವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭಾನುವಾರ ಪ್ರವಾಸ ಮುಗಿಸಿಕೊಂಡು ಸುನಿಲ್ ಹಾಗೂ ಶಶಿಕುಮಾರ್ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಮಗೆ ಅಪಘಾತದ ವಿಷಯ ತಿಳಿದಿದೆ. ತಾಯಿ ಬಳಿ ನನ್ನ ಮಗ ಫೋನ್‍ನಲ್ಲಿ ಮಾತನಾಡಿದ್ದ. ಬೆಂಗಳೂರು ಸಮೀಪದಲ್ಲೇ ಇದ್ದೇನೆ, ಮನೆಗೆ ಬೇಗ ಬರುತ್ತೇನೆ ಅಂದಿದ್ದ. ಆದ್ರೆ ಈ ರೀತಿ ಮನೆಗೆ ಹೆಣವಾಗಿ ಬರುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಬಡವರು ಈ ರೀತಿ ಅಪಘಾತ ಮಾಡಿದ್ದರೆ ಬಿಡುತ್ತಿದ್ದರಾ? ಅವರು ರಾಜಕಾರಣಿ ಅಂತ ಸುಮ್ಮನೆ ಆರೋಪಿಗೆ ತಕ್ಕ ಶಿಕ್ಷೆ ನೀಡಿ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಶಶಿಕುಮಾರ್ ತಂದೆ ಕಣ್ಣೀರಿಟ್ಟಿದ್ದಾರೆ.

rmg shashi father

ನಾವು ಬಡವರು, ಬಹಳ ಕಷ್ಟ ಪಟ್ಟು ಮಕ್ಕಳನ್ನು ಸಾಕಿದ್ದೇವೆ. ಮೂತ್ರವಿಸರ್ಜನೆ ಮಾಡುತ್ತ ನಿಂತಿದ್ದ ಮಕ್ಕಳಿಗೆ ಕಾರು ಡಿಕ್ಕಿ ಹೊಡೆದು ಅವರನ್ನು ರಸ್ತೆಯಲ್ಲೇ ಬಿಟ್ಟು ಸಿ.ಟಿ ರವಿ ಹೋಗಿದ್ದಾನೆ. ಮಗನ ಮದುವೆ ಮಾಡಬೇಕು ಅಂತಿದ್ದೆ. ಎದೆ ಎತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ನಮ್ಮ ಮಕ್ಕಳಿಗೆ ನ್ಯಾಯ ಕೊಡಿಸಿ. ನಮಗೂ ವಯಸಾಯ್ತು ಮಗ ನಮಗೆ ಆಧಾರವಾಗಿ ಇರುತ್ತಾನೆ ಅಂದುಕೊಂಡಿದ್ದೆ. ಈಗ ನಮಗೆ ಯಾರು ಗತಿ? ಯಾರು ನಮ್ಮನ್ನು ಸಾಕುತ್ತಾರೆ. ಮಕ್ಕಳೇ ನಮಗೆ ಆಸ್ತಿ, ಅವರನ್ನೇ ಕಳೆದುಕೊಂಡ ಮೇಲೆ ಏನು ಮಾಡಿದರು ಪ್ರಯೋಜನವಿಲ್ಲ ಎಂದು ರೋಧಿಸುತ್ತಿದ್ದಾರೆ.

RAVI CLARIFY copy

ಶ್ರೀಮಂತರು, ರಾಜಕಾರಣಿಗಳು ತಮ್ಮ ಬಲದಿಂದ ನಮ್ಮಂತ ಬಡವರಿಗೆ ಸಹಾಯ ಮಾಡಲು ಬರುವವರನ್ನು ಕೊಂದುಬಿಡುತ್ತಾರೆ. ಬಂದವರಿಗೆ ಬೆಲೆಯಿಲ್ಲ, ನನ್ನ ಮಗ ನನಗೆ ಬೇಕು. ನಮಗೆ ನ್ಯಾಯ ಕೊಡಿಸಿ. ಬಡವರ ಮಕ್ಕಳು ಅಂತ ಈ ಪ್ರಕರಣವನ್ನು ಮುಚ್ಚಿಹಾಕಬೇಡಿ. ಹಣ ಇರುವವರು ತಮ್ಮ ತಪ್ಪಿಗೆ ಯಾರನ್ನೋ ಆರೋಪಿ ಮಾಡಿ ಕೇಸ್ ಮುಚ್ಚಿಹಾಕುತ್ತಾರೆ. ಆಗ ನಾವು ಏನು ಮಾಡೋಕು ಅಗಲ್ಲ. ನಮ್ಮ ನೋವು ಕೇಳೋರು ಯಾರು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಈಗಾಗಲೇ ಅಪಘಾತದಲ್ಲಿ ಮೃತಪಟ್ಟ ಸುನಿಲ್ ಹಾಗೂ ಶಶಿಕುಮಾರ್ ಅವರ ಮೃತದೇಹವನ್ನು ಅವರ ಸ್ವಗ್ರಾಮದತ್ತ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

https://www.youtube.com/watch?v=CG4X-v7Ije4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *