ಗದಗ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತಿಕ್ಕಾಟದಿಂದ ಸಿದ್ದರಾಮಯ್ಯ ತಲೆ ಖಾಲಿ ಆಗಿದ್ದು, ಅವರ ತಲೆ ದೆವ್ವಗಳ ಮನೆ ಆಗಿದೆ ಅಂತ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದರು.
ನಗರದ ಶ್ರೀನಿವಾಸ ಕಲ್ಯಾಣ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯನವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆರ್ಎಸ್ಎಸ್ನವರು ಕಾಂಗ್ರೆಸ್ನವರಿಗೆ ಏನು ಮಾಡಿದ್ದಾರೆ? ಆರ್ಎಸ್ಎಸ್ಗೆ ಬೈದರೆ 2023ಕ್ಕೆ ಅಧಿಕಾರ ಬರಬಹುದು ಎಂದು ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ
ಆರ್ಎಸ್ಎಸ್ಗೆ ಬೈದರೆ ಅವರ ಪರ ಇರುವ ನಾಲ್ಕೈದು ಹಿಂದೂ ವೋಟು ಸಹ ಬಿಜೆಪಿಗೆ ಬರುತ್ತವೆ. ಹಾಗಂತ ಅವರದ್ದೇ ಪಕ್ಷದವರು ಹೇಳುತ್ತಿದ್ದಾರೆ ನಾವಲ್ಲ. ಸಿದ್ದರಾಮಯ್ಯ ಟಾರ್ಗೆಟ್ ಡಿಕೆಶಿ, ಡಿಕೆಶಿ ಟಾರ್ಗೆಟ್ ಸಿದ್ದರಾಮಯ್ಯ ಅಂತ ಸುರ್ಜೆವಾಲರೇ ಹೇಳಿದ್ದಾರೆ. ಒಣ ತಿಕ್ಕಾಟ ಬಿಡಿ ಅಂತ ಹೇಳಿದ್ದು ನಾವಲ್ಲ, ಸುರ್ಜೆವಾಲರು. ಕಾಂಗ್ರೆಸ್ ಒಡೆದ ಮನೆ ಆಗಿದೆ ಅದನ್ನು ಮುಚ್ಚಿಕೊಳ್ಳಲಿ ಎಂದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು?
ಚಡ್ಡಿ ಸುಡುವ ವಿಚಾರವಾಗಿ ಮಾತನಾಡಿ, ಎಷ್ಟು ಚಡ್ಡಿ ಸುಡುತ್ತಾರೋ ಅಷ್ಟು ಹೊಸ ಚಡ್ಡಿ ಸೃಷ್ಟಿ ಆಗುತ್ತವೆ. ರಾಮಾಯಣ, ಮಹಾಭಾರತದಲ್ಲಿ ಹನಿ ರಕ್ತ ಬಿದ್ದರೆ ಅದ್ಯಾರೋ ಹುಟ್ಟುತ್ತಿದ್ದರು. ಹಾಗೆಯೇ ನಮ್ಮಲ್ಲಿ ಒಂದು ಚಡ್ಡಿ ಸುಟ್ಟರೆ ಹತ್ತಾರು ಚಡ್ಡಿಗಳು ಹುಟ್ಟಿಕೊಳ್ಳುತ್ತವೆ. ಚಡ್ಡಿನಾದರೂ ಸುಡಲಿ, ಬೇಕಾದರೆ ಕಳೆದು ಅವರ ಪಂಚೆನಾದರೂ ಸುಟ್ಟುಕೊಳ್ಳಲಿ ನಾವೇನು ಮಾಡೋದು ಎಂದರು.
ಸಿಎಂ ಇಬ್ರಾಹಿಂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಅವರು ಮಾಸ್ಟರ್ ಹಿರಣ್ಣಯ್ಯ ನಾಟಕ ಇದ್ದಂತೆ. ಒಂದು ದಿನ ಹೇಳಿದ ಡೈಲಾಗ್ ಮಾರನೆಯ ದಿನ ಹೇಳುತ್ತಿರಲಿಲ್ಲ. ಹಾಗೇ ಕಾಂಗ್ರೆಸ್ ಇದ್ದಾಗೊಂದು ಮಾತು, ಬಿಜೆಪಿ, ಜೆಡಿಎಸ್ನಲ್ಲಿ ಇದ್ದಾಗ ಒಂದೊಂದು ತರಹದ ಮಾತುಗಳನ್ನು ಆಡುತ್ತಾರೆ ಎಂದರು.