ಬೆಂಗಳೂರು: ಇದೆಲ್ಲಾ ನಿರೀಕ್ಷಿತ, ನಮ್ಮನ್ನೆಲ್ಲರನ್ನೂ ಅನರ್ಹ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ದೇವರು ಚೆನ್ನಾಗಿಟ್ಟಿರಲಿ ಎಂದು ಅನರ್ಹ ಶಾಸಕ ಬೈರತಿ ಬಸವರಾಜ್ ಹೇಳಿದ್ದಾರೆ.
ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂಬ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ನಮ್ಮ ಇಂದಿನ ಸ್ಥಿತಿಗೆ ಕಾಂಗ್ರೆಸ್ಸಿನ ಸಚಿವರು ಹಿರಿಯ ನಾಯಕರೇ ಕಾರಣ. ನಮಗೆ ಯಾವ ರೀತಿಯಾಗಿ ಕಿರುಕುಳ ಕೊಟ್ಟರು ಅನ್ನೋದನ್ನು ಪ್ರೆಸ್ ಮೀಟ್ ಮಾಡಿ ಹೇಳುತ್ತೇವೆ ಎಂದರು.
ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ನಾವೇನೂ ಅಪ್ಲಿಕೇಶನ್ ಹಾಕ್ಕೊಂಡಿಲ್ಲ. ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸೋ ಪಕ್ಷದ ಜೊತೆ ಕೈ ಜೋಡಿಸುತ್ತೇವೆ. ನನ್ನ ಕ್ಷೇತ್ರದ ಜನ ಏನು ಹೇಳ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ. ಎಲೆಕ್ಷನ್ ಗೆ ನಿಲ್ಲಲು ಹೇಳಿದರೆ ಸ್ಪರ್ಧೆ ಮಾಡುತ್ತೇನೆ. ಇಲ್ಲವೆಂದಲ್ಲಿ ಮನೆಯಲ್ಲೇ ಇರುತ್ತೇನೆ ಎಂದು ಅವರು ತಿಳಿಸಿದರು.
ಸ್ಪೀಕರ್ ಭಾನುವಾರ ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆಸು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಆಗಮಿಸಿದ್ದಾರೆ.
ನಮಗೆ ದ್ರೋಹ ಬಗೆದು ಪಕ್ಷವನ್ನು ಬಿಟ್ಟು ಯಾರು ಬಿಜೆಪಿ ಜತೆ ಹೋಗಿದ್ದಾರೋ, ಅವರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. @INCKarnataka
— Siddaramaiah (@siddaramaiah) July 23, 2019
ಇದೀಗ ಉಳಿದ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಏನು ತೀರ್ಪು ಕೊಡುತ್ತದೆ ಎಂಬ ಕುತೂಹಲ ಮೂಡಿದೆ.