ನವದೆಹಲಿ: ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ವರ್ಸಸ್ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕದನದ ವಿಚಾರ ಸಂಬಂಧ ಬಿಜೆಪಿ ಸಂಸದರಲ್ಲೇ (BJP MP’s) ಒಡಕು ಮೂಡಿದೆ.
ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿ ರಾಜ್ಯ ಬಿಜೆಪಿ ಸಂಸದರ ಸಭೆ (Meeting) ನಡೆಯಿತು. ಈ ಸಭೆಯಲ್ಲಿ ಸಂಸದರಲ್ಲಿ ಮೂರು ಗುಂಪುಗಳಿರುವುದು ಹೈಕಮಾಂಡ್ ನಾಯಕರಿಗೆ ಗೊತ್ತಾಗಿದೆ.
ಯತ್ನಾಳ್ ಪರ ಒಂದಷ್ಟು ಮಂದಿ ಒಲವು ತೋರಿದರೆ ಕೆಲವರು ವಿಜಯೇಂದ್ರ ಪರ ಬ್ಯಾಟ್ ಬೀಸಿದರು. ಇನ್ನೊಂದು ಗುಂಪು ತಟಸ್ಥವಾಗಿ ಉಳಿದಿತ್ತು. ಮೂವರು ಬಿಜೆಪಿ ಸಂಸದರು ಯತ್ನಾಳ್ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಉಚ್ಛಾಟನೆ ಬೇಡ ಎಂದು ನಡ್ಡಾಗೆ ಮನವಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್ ಚಾರ್ಜ್
ನಾಲ್ವರು ಬಿಜೆಪಿ ಸಂಸದರು ವಿಜಯೇಂದ್ರ ಪರ ಮಾತನಾಡಿ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 10 ಸಂಸದರು ಯಾರ ಪರ-ವಿರುದ್ಧ ನಿಲ್ಲದೇ ತಟಸ್ಥವಾಗಿಯೇ ಉಳಿದಿದ್ದರು. ಯಾರ ಮೇಲಾದರೂ ಕ್ರಮ ತೆಗೆದುಕೊಳ್ಳಿ. ಒಟ್ಟಿನಲ್ಲಿ ಪಕ್ಷವನ್ನು ಸರಿ ಮಾಡಿ ಎಂದು ತಟಸ್ಥ ಬಣ ಮನವಿ ಮಾಡಿದೆ.
ಮೂರು ಗುಂಪುಗಳ ಅಭಿಪ್ರಾಯವನ್ನು ಸಂಗ್ರಹಿಸಿರುವ ಹೈಕಮಾಂಡ್ ಯಾರ ಮಾತನ್ನು ಕೇಳುತ್ತದೆ? ಯಾರಿಗೆ ಶಿಕ್ಷೆ? ಯಾರಿಗೆ ಶ್ರೀರಕ್ಷೆ? ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.