ದಾವಣಗೆರೆ: ನಮ್ಮಪ್ಪ ಚಿರಯುವಕ ಹಾಗೂ ಜನ ಮೆಚ್ಚಿದ ನಾಯಕ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್ವೈ ವಿರುದ್ಧ ಈ ಹಿಂದೆ ರಾಜಕೀಯ ಷಡ್ಯಂತ್ರ ನಡೆದಿದೆ. ಯಾರ ವಿರುದ್ಧವೂ ಅಷ್ಟೊಂದು ಪಿತೂರಿ ನಡೆದಿಲ್ಲ. ಜನ ಮೆಚ್ಚಿದ ನಾಯಕ ಅಂದರೆ ಅದು ಯಡಿಯೂರಪ್ಪ. ಬಿಸ್ವೈ ಅವರು ಚಿರಯುವಕನಂತೆ ಈಗಲೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಅಪ್ಪನನ್ನು ಹಾಡಿ ಹೊಗಳಿದ್ದಾರೆ.
ಸಮಾಜದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆದ ರಾಜಕೀಯ ದಾಳಿಗಳನ್ನು ಉಲ್ಲೇಖಿಸಿದರೆ ಬಹುಶಃ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಬಿಎಸ್ವೈ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರ, ಪಿತೂರಿ ಯಾರ ಮೇಲೂ ನಡೆದಿರಲಿಕ್ಕಿಲ್ಲ. ಆದರೂ ಬಿಎಸ್ವೈ ಅವರು ಯಾರಿಗೂ ಕೇಡು ಬಯಸದ ರೀತಿಯಲ್ಲಿ ರಾಜ್ಯದಲ್ಲಿ ವಿಶಿಷ್ಟವಾದ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಸರ್ವವರ್ಗಗಳ ಜನತೆ ಯಡಿಯೂರಪ್ಪ ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಇಡೀ ದೇಶದ ಇತಿಹಾಸದಲ್ಲಿ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ 75 ವರ್ಷ ಆದ ಬಳಿಕ ಯಾರು ಕೂಡ ರಾಜಕೀಯ ಸ್ಥಾನವನ್ನು ಪಕ್ಷದಲ್ಲಿ ಕೊಟ್ಟಿಲ್ಲ. ಆದರೆ ಆದಿಚುಂಚನಗಿರಿ ಶ್ರೀ ಹಾಗೂ ರಾಜ್ಯದ ಹಿತೈಷಿಗಳ ಆಶೀರ್ವಾದದಿಂದ ಯಡಿಯೂರಪ್ಪ ಅವರಿಗೆ 75 ವರ್ಷ ಆದರೂ ಇಂದು ರಾಜ್ಯದಲ್ಲಿ ಒಳ್ಳೆಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ವೇಳೆ ರಾಜ್ಯಾಧ್ಯಕ್ಷ ಕಟೀಲ್ ಅವರು ಪಕ್ಷದ ಹುದ್ದೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಕಟೀಲ್ ಅವರು ರಾಜ್ಯಾಧ್ಯಕ್ಷರಾದಾಗಿನಿಂದ ನಾನು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಯುವ ಮೋರ್ಚಾಕ್ಕೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆಯಾಗಿಲ್ಲ ಎಂದರು.
ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಸೇರದಂತೆ ಎಲ್ಲರಿಗೂ ನೈತಿಕತೆ ಪಾಠ ಹೇಳಿದ್ದೀರಿ. ಆದರೆ ಆದಿಚುಂಚನಗಿರಿ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡುವ ಮೂಲಕ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಇದರಲ್ಲಿ ಇಲ್ಲವ ನೈತಿಕತೆ ಎಂದು ಪ್ರಶ್ನಿಸಿದರು.