ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದ ನಂತರ ಶಕ್ತಿಸೌಧವಾದ ವಿಧಾನಸೌಧದಲ್ಲಿ ಸಚಿವರು ನಾಪತ್ತೆಯಾಗಿದ್ದು, ಅಹವಾಲುಗಳನ್ನು ಸಲ್ಲಿಸಲು ಬರುತ್ತಿರುವ ಸಾರ್ವಜನಿಕರು ಸಚಿವರ ಖಾಲಿ ಕೊಠಡಿಗಳನ್ನು ನೋಡಿ ಪರದಾಟ ನಡೆಸುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆಗಳು ಘೋಷಣೆಯಾಗಿದ್ದು, ಪರಿಣಾಮವಾಗಿ ರಾಜ್ಯದ ಶಕ್ತಿಸೌಧದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಯಾವೊಬ್ಬ ಸಚಿವರು ಸಹ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ.
ಸಮ್ಮಿಶ್ರ ಸರ್ಕಾರ ಸಚಿವರ ಉಪ ಚುನಾವಣೆಯ ನೆಪದಲ್ಲಿ ರಾಜ್ಯದ ಜನರನ್ನೇ ಮರೆತಿದ್ದಾರೆ. ರಾಜ್ಯದ ಶಕ್ತಿಸೌಧ ಸಂಪೂರ್ಣ ಖಾಲಿಯಾಗಿದ್ದು, ಸಚಿವರಿಲ್ಲದೇ ಕೊಠಡಿಗಳು ಬಣಗುಟ್ಟುತ್ತಿವೆ. ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲೂ ಸಹ ಯಾವೊಬ್ಬ ಸಚಿವರ ಜನರ ಸಮಸ್ಯೆಗಳನ್ನು ಆಲಿಸಲು ಸಿಗುತ್ತಿಲ್ಲ. ಚುನಾವಣಾ ನೆಪದಲ್ಲಿ ಶಕ್ತಿಸೌಧದಲ್ಲಿ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಆದರೆ ಚುನಾವಣಾ ನೆಪ ಹೇಳುತ್ತಿರುವ ಸಚಿವರು ಯಾವುದೇ ಪ್ರಚಾರಕ್ಕೂ ಹೋಗುತ್ತಿಲ್ಲ.
ಸಚಿವರು ಈಗ ಬರ್ತಾರೆ, ಆಗ ಬರ್ತಾರೆ ಅಂತ ಸಾರ್ವಜನಿಕರು ಕಾದು ಕಾದು, ಸಪ್ಪೆ ಮೋರೆಹಾಕಿಕೊಂಡು ಮರಳುತ್ತಿದ್ದಾರೆ. ಗುರುವಾರ ವಿಧಾನಸೌಧಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ಬಿಟ್ಟರೇ, ಯಾವೊಬ್ಬ ಸಚಿವರು ವಿಧಾನಸೌಧದಲ್ಲಿ ಜನರಿಗೆ ಸಿಗುತ್ತಿಲ್ಲ. ಉಪ ಚುನಾವಣೆಯ ನೆಪದಿಂದಾಗಿ ಶಕ್ತಿ ಸೌಧದ ಆಡಳಿತ ಯಂತ್ರ ಕುಸಿಯುತ್ತಿದೆ. ಸಚಿವರ ಕೊಠಡಿಗಳು ಕ್ಲೋಸ್ ಆಗಿದ್ದು, ಅವರ ಸಿಬ್ಬಂದಿ ಸಹ ಯಾವೊಬ್ಬ ಸಾರ್ವಜನಿಕರ ಕಣ್ಣಿಗೂ ಸಿಗುತ್ತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv