ಬೆಂಗಳೂರು: ಗ್ರಾಹಕರು ಪಾವತಿಸಿದ ನೀರಿನ ಬಿಲ್ಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಸೇರಿದಂತೆ 9 ಮಂದಿಯನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಕಂದಾಯ ವ್ಯವಸ್ಥಾಪಕಿ ನಾಗವೇಣಿ, ಆನಂದರಾಜ್, ನವೋದಯ ಭದ್ರತಾ ಕೇಂದ್ರದ ವರದರಾಜ್ ಮತ್ತು ಕಿರಣ್ ಕುಮಾರ್ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: 74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್ಗಿದ್ರು 40+ ಸಿಬ್ಬಂದಿ
ಅಕ್ರಮದ ಬಗ್ಗೆ ಬೆಂಗಳೂರಿನ ಬಸವನಗುಡಿ, ಬೊಮ್ಮನಹಳ್ಳಿ, ಕೊಡಿಗೇಹಳ್ಳಿ, ಜೆ.ಪಿ.ನಗರ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿತ್ತು. ಬಿಡಬ್ಲ್ಯೂಎಸ್ಎಸ್ಬಿ ಸಹಾಯಕ ನಿರ್ವಾಹಕ ಎಂಜಿನಿಯರ್ ನಾಗರಾಜ್ ನೀಡಿದ್ದ ದೂರಿನನ್ವಯ ತನಿಖೆ ನಡೆಸಿದಾಗ ಬಂಧಿತ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ 7 ಕೋಟಿ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ವಂಚನೆ ಹೇಗೆ?
ಗ್ರಾಹಕರ ಬಳಿ ನಗದು, ಚೆಕ್ ಹಾಗೂ ಯುಪಿಐ ಐಡಿ ಮೂಲಕ ಮೀಟರ್ ರೀಡರ್ಸ್ ಹಣ ಪಡೆಯುತ್ತಿದ್ದರು. ಬಳಿಕ ಆರೋಪಿಗಳು ಈ ಹಣವನ್ನು ಜಲಮಂಡಳಿ ಬ್ಯಾಂಕ್ ಖಾತೆಗೆ ಪಾವತಿಸಿದ ಬಗ್ಗೆ ನಕಲಿ ರಶೀದಿಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು.
ಹಗರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತಷ್ಟು ಮೀಟರ್ ರೀಡರ್ಸ್ ಹಾಗೂ ಅಧಿಕಾರಿಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಎಲ್ಲಾ ವಿಭಾಗದ ಮೀಟರ್ ರೀಡಿಂಗ್ ಲೆಕ್ಕವನ್ನು ಪರಿಶೋಧನೆ ನಡೆಸಲು ಮುಂದಾಗಿದ್ದಾರೆ.