ತಿರುವನಂತಪುರ: ಕೇರಳದ ಅಳತ್ತೂರು ಕ್ಷೇತ್ರದ ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ಗೆ ಕಾರು ಖರೀದಿಗಾಗಿ ಹಣ ಸಂಗ್ರಹಿಸಲು ಕಾಂಗ್ರೆಸ್ ಕಾರ್ಯಕರ್ತರು ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದಾರೆ.
ಜನರಿಂದಲೇ ಸಂಸದೆಗೆ ಹಣ ಸಂಗ್ರಹಿಸಿ(ಕ್ರೌಡ್ ಫಂಡಿಗ್) ಕಾರು ಖರೀದಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ರಮ್ಯಾ ಅವರು ಆಯ್ಕೆಯಾಗಿದ್ದಾರೆ. “ನಮ್ಮ ಸಂಸದೆಗೆ ಕಾರು ಖರೀದಿಸುವ ಸಂಬಂಧವಾಗಿ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದ್ದೇವೆ. ಆಸಕ್ತಿ ಇರುವ ವ್ಯಕ್ತಿಗಳು ದೇಣಿಗೆ ನೀಡಬಹುದು” ಎಂದು ಅಳತ್ತೂರು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪಾಳಯಂ ಪ್ರದೀಪ್ ಶನಿವಾರ ತಿಳಿಸಿದ್ದಾರೆ.
ಕೇರಳದ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆ.9ರಂದು ಕಾರ್ ಕೀಲಿ ಕೈ ಹಸ್ತಾಂತರಿಸಲಿದ್ದಾರೆ.
ಸಂಸದೆ ರಮ್ಯಾ ಪ್ರತಕ್ರಿಯಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಅಹರ್ನಿಶಿ ದುಡಿದಿದ್ದಾರೆ. ಬೇರೆ ಯಾವ ಸಂಘಟನೆಯ ಈ ರೀತಿಯ ಕೆಲಸ ಮಾಡಲಾರದು ಎಂದು ಹೇಳಿದ್ದಾರೆ.
ರಮ್ಯಾ ಅವರಿಗೆ ಕಾರು ನೀಡಲು ಹಲವು ವ್ಯಕ್ತಿಗಳು ಮುಂದೆ ಬಂದಿದ್ದರು. ಆದರೆ ಉಡುಗೊರೆಯಾಗಿ ನಾನು ಕಾರನ್ನು ವ್ಯಕ್ತಿಗಳಿಂದ ತೆಗೆದುಕೊಳ್ಳುವುದಿಲ್ಲ ಎಂದು ರಮ್ಯಾ ತಿಳಿಸಿದ್ದರು ಎಂದು ನ್ಯಾಷನಲ್ ಯೂಥ್ ಕಾಂಗ್ರೆಸ್ ಹೇಳಿದೆ.