ಭೋಪಾಲ್: ಮಧ್ಯಪ್ರದೇಶದ (Madhya Pradesh) ಸೆಹೋರ್ ಜಿಲ್ಲೆಯಲ್ಲಿ ಉದ್ಯಮಿ ಮತ್ತು ಅವರ ಪತ್ನಿ ನೇಣಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಡೆತ್ ನೋಟ್ನಲ್ಲಿ ಬಿಜೆಪಿ (BJP) ಹಾಗೂ ಇ.ಡಿ (Enforcement Directorate) ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಡೆತ್ ನೋಟ್ನಲ್ಲಿ ಉದ್ಯಮಿ ಮನೋಜ್ ಪರ್ಮಾರ್, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ (Congress) ನಾಯಕರನ್ನು ಉಲ್ಲೇಖಿಸಿ ನಮ್ಮ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬಿಜೆಪಿ ನಾಯಕರು ಕಿರುಕುಳ ನೀಡುತ್ತಿದ್ದಾರೆ ಉಲ್ಲೇಖಿಸಿದ್ದಾರೆ.
ಪರ್ಮಾರ್ ಮತ್ತು ಅವರ ಪತ್ನಿ ಪಕ್ಷದ ಬೆಂಬಲಿಗರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಅವರ ರಾಜಕೀಯ ಒಲವಿನ ಮೇಲೆ ಇ.ಡಿ ಅವರಿಗೆ ಕಿರುಕುಳ ನೀಡಿದೆ. ರಾಹುಲ್ ಗಾಂಧಿಯವರ ʻಭಾರತ್ ಜೋಡೋ (ನ್ಯಾಯ) ಯಾತ್ರೆʼ ಸಮಯದಲ್ಲಿ ದಂಪತಿಯ ಮಕ್ಕಳು ಸಂಗ್ರಹಿಸಿದ್ದ ಹುಂಡಿ ಹಣವನ್ನು ಉಡುಗೊರೆಯಾಗಿ ನೀಡಿದ್ದರು.
ದಂಪತಿಯ ಕುಟುಂಬದ ಸದಸ್ಯರು ಇನ್ನೂ ದುಃಖದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಆತ್ಮಹತ್ಯೆ ಪತ್ರದ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಉಪವಿಭಾಗಾಧಿಕಾರಿ (ಎಸ್ಡಿಒಪಿ) ಆಕಾಶ್ ಅಮಲ್ಕರ್ ತಿಳಿಸಿದ್ದಾರೆ.
ಡೆತ್ ನೋಟ್ನ್ನು ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದ ತಮ್ಮ ಮನೆಯಲ್ಲಿ ಪರ್ಮಾರ್ ಮತ್ತು ಅವರ ಪತ್ನಿ ನೇಹಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.