ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇಂದು ರಾತ್ರಿ ಕಾರಿನಲ್ಲಿ ಬಂದ ಆಗಂತುಕರು ಸಿನಿಮೀಯ ರೀತಿಯಲ್ಲಿ ಉದ್ಯಮಿಯನ್ನು ಅಪಹರಿಸಿದ ಘಟನೆ ನಡೆದಿದೆ.
ಮುಂಡಗೋಡು ಪಟ್ಟಣದ ಜಮೀರಅಹ್ಮದ್ ದರ್ಗಾವಾಲೆ ಎಂಬಾತ ಅಪಹರಣಕ್ಕೊಳಗಾದ ವ್ಯಕ್ತಿ. ಪಟ್ಟಣ ಮಾದರಿ ಶಾಲೆಯ ಎದುರು ಸ್ಕೂಟಿಯಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಬಿಳಿ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಈತನನ್ನು ಬೀಳಿಸಿದ್ದಾರೆ.
ಬಿದ್ದಾಗ ಈತನ ಮೇಲೆ ಹಲ್ಲೆ ಮಾಡಿ ಕಾರಿನೊಳಗೆ ಹಾಕಿಕೊಂಡಿದ್ದು, ಇನ್ಬೊಬ್ಬನಿಗೆ ಚಾಕು ತೋರಿಸಿ ಓಡಿಸಿದ್ದಾರೆ. ನಂತರ ಹಾವೇರಿ ಮಾರ್ಗವಾಗಿ ಟೋಲ್ ದಾಟಿ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಅಪಹರಣಕ್ಕೊಳಗಾದ ಜಮೀರಅಹ್ಮದ್ ದರ್ಗಾವಾಲೆ ಬಡ್ಡಿ ವ್ಯವಹಾರ ಹಾಗೂ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದು ಕ್ರಿಕೆಟ್ (cricket) ಬೆಟ್ಟಿಂಗ್ ಸಹ ಮಾಡುತಿದ್ದ ಎನ್ನಲಾಗಿದ್ದು, ಈತ ನಾಳೆ ಕ್ರಿಕೆಟ್ ಕ್ರೀಡಾಕೂಟ ಸಹ ಆಯೋಜಿಸಿದ್ದು ತಂಡ ಸಹ ಸಿದ್ಧಪಡಿಸಿದ್ದನು.
ಈತನನ್ನು ಅಪಹರಣ ಮಾಡಲು ಕಾರಣ ತಿಳಿಯಬೇಕಿದ್ದು, ಅಪಹರಣ ಮಾಡಿದವರು ಹಾವೇರಿ ಭಾಗದವರೆಂದು ಶಂಕಿಸಲಾಗಿದೆ. ಪೊಲೀಸರು ಸಹ ವಾಹನದ ಟ್ರಾಕ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.